ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಜನಗಣತಿ 2027 ಕಾರ್ಯವನ್ನು ನಡೆಸುವ ಉದ್ದೇಶದಿಂದ ಒಟ್ಟು 909 ಗಣತಿ ಸಿಬ್ಬಂದಿಯನ್ನು (enumerators) 7 ಚಾರ್ಜ್ ಅಧಿಕಾರಿಗಳ ಅಧೀನದಲ್ಲಿ ನೇಮಕ ಮಾಡಲಾಗಿದೆ. ಇದಲ್ಲದೆ, ಸ್ವಯಂ ಗಣತಿ ಪ್ರಕ್ರಿಯೆ ಎ.1ರಿಂದ 15ರವರೆಗೆ ನಡೆಯಲಿದೆ ಎಂದು ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ರವಿಚಂದ್ರ ನಾಯಕ್ ತಿಳಿಸಿದ್ದಾರೆ.
ನಾಗರಿಕರು ಸುರಕ್ಷಿತ ಆನ್ಲೈನ್ ಪೋರ್ಟಲ್ (www.sc.census.gov.in) ಮೂಲಕ ವೈಯಕ್ತಿಕವಾಗಿ ತಮ್ಮದೇ ಆದ ಮಾಹಿತಿಗಳನ್ನು ಭರ್ತಿ ಮಾಡಲು ಅನುಕೂಲ ಮಾಡಿ ಕೊಡಲಾಗಿದೆ.
ಗಣತಿ ಸಿಬ್ಬಂದಿಗೆ ಕಡ್ಡಾಯ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಕೆಲ ಗಣತಿ ಸಿಬ್ಬಂದಿ ಸಮಂಜಸವಲ್ಲದ ಕಾರಣಗಳನ್ನು ನೀಡುತ್ತಾ ತರಬೇತಿಗೆ ಗೈರುಹಾಜರಾಗಿ ರುವುದು ಗಮನಕ್ಕೆ ಬಂದಿದೆ. ಭಾರತದ ಜನಗಣತಿ ಕಾರ್ಯದ ಯಶಸ್ವಿ ಅನುಷ್ಠಾನಕ್ಕೆ ತರಬೇತಿ ಅತ್ಯಂತ ಮಹತ್ವದ್ದಾಗಿದ್ದು, ಇಂತಹ ಗೈರುಹಾಜರಿಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಹೇಳಿದ್ದಾರೆ.
ಸಂಬಂಧಿಸಿದ ಎಲ್ಲಾ ಗಣತಿ ಸಿಬ್ಬಂದಿ ತಮ್ಮ ಕಾರ್ಯಗಳನ್ನು ಜವಾಬ್ದಾರಿಯಿಂದ ನಿರ್ವಹಿಸಲು ಸಿದ್ಧರಾಗಿರಬೇಕು. ಎಲ್ಲಾ ಚಾರ್ಜ್ ಅಧಿಕಾರಿಗಳು ತಮ್ಮ ಅಧೀನದಲ್ಲಿರುವ ಗಣತಿ ಸಿಬ್ಬಂದಿಯ ಹಾಜರಾತಿಯನ್ನು ಖಚಿತಪಡಿಸಿ, ಅಗತ್ಯ ವರದಿಯನ್ನು ಸಲ್ಲಿಸಲು ಸೂಚಿಸಲಾಗಿದೆ. ಈ ಹಿನ್ನೆಲೆಯಲ್ಲಿ, ಭಾರತದ ಜನಗಣತಿ ಕಾಯ್ದೆ, 1948 (Census Act, 1948) ಅದರಡಿ ಜಾರಿಯಲ್ಲಿರುವ ನಿಯಮಾವಳಿಗಳ ಪ್ರಕಾರ, ಗೈರುಹಾಜರಾದ ಗಣತಿ ಸಿಬ್ಬಂದಿಗೆ ನೋಟಿಸ್ ನೀಡಲಾಗಿದೆ. ಮುಂದಿನ ತರಬೇತಿಗೆ ಅವರು ಕಡ್ಡಾಯವಾಗಿ ಹಾಜರಾಗಬೇಕಾಗಿದ್ದು ಪಾಲನೆ ಮಾಡದವರ ವಿರುದ್ಧ ಕಾನೂನು ಮತ್ತು ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತ ರವಿಚಂದ್ರ ನಾಯಕ್ ಎಚ್ಚರಿಸಿದ್ದಾರೆ.
Kshetra Samachara
03/04/2026 08:23 am