ಮೈಸೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿಯನ್ನು ಕೊಂದು ತಲೆ ಮರೆಸಿಕೊಂಡಿದ್ದ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮೈಸೂರು ಜಿಲ್ಲೆಯ ಸರಗೂರು ತಾಲೂಕಿನ ಬಿದರಹಳ್ಳಿ ಗ್ರಾಮದ ನಿವಾಸಿ ಶ್ರುತಿ (30) ಹತ್ಯೆಯಾದವರಾಗಿದ್ದು, ಪತಿ ಜಗದೀಶ್ (45) ಬಂಧಿತ ಆರೋಪಿ,
ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಕೇರಳಾಪುರ ನಿವಾಸಿಯಾದ ಜಗದೀಶ್ ಜೊತೆ ಶ್ರುತಿ ಅವರ ವಿವಾಹ ಕಳೆದ 12 ವರ್ಷಗಳ ಹಿಂದೆ ನಡೆದಿತ್ತು. ಈ ದಂಪತಿಗೆ ಒಂದು ಗಂಡು ಮತ್ತು ಒಂದು ಹೆಣ್ಣು ಮಗು ಕೂಡಾ ಇದೆ.
ಬೇಕರಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದ ದಂಪತಿ ಹಲವು ವರ್ಷಗಳ ಕಾಲ ಅನ್ಯೋನ್ಯವಾಗಿ ಸಂಸಾರ ನಡೆಸುತ್ತಿದ್ದರು. ಆದರೆ ಇತ್ತೀಚೆಗೆ ಅವರಿಬ್ಬರ ನಡುವೆ ಹೊಂದಾಣಿಕೆ ಇರಲಿಲ್ಲ ಎನ್ನಲಾಗಿದ್ದು, ಕ್ಷುಲ್ಲಕ ವಿಚಾರಗಳಿಗೂ ಪದೇ ಪದೆ ಜಗಳವಾಡುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಇದೇ ರೀತಿ ಮತ್ತೆ ಗುರುವಾರ ಮಧ್ಯಾಹ್ನ ಪತ್ನಿಯೊಂದಿಗೆ ಜಗಳವಾಡಿದ ಪತಿ ಜಗದೀಶ್, ಆಕೆಗೆ ಕೈಯಿಂದ ಹೊಡೆದು ಸಾಯಿಸಿ ಬಳಿಕ ಮನೆಯ ತೊಲೆಗೆ ಸೀರೆಯಿಂದ ನೇಣು ಹಾಕಿ ತಲೆಮರೆಸಿಕೊಂಡಿದ್ದನು.
ಈ ಬಗ್ಗೆ ಸರಗೂರು ಠಾಣಾ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಮಲ್ಲಿಕಾರ್ಜುನ್ ಬಾಲದಂಡಿ ಹಾಗೂ ಹುಣಸೂರು ಪೊಲೀಸ್ ಉಪಾಧೀಕ್ಷಕರಾದ ರವಿ ಅವರು ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.
ಬಳಿಕ ಆರೋಪಿ ಜಗದೀಶನ ಬಂಧನದ ಸಂಬಂಧ ಸರಗೂರು ಪೊಲೀಸ್ ತಂಡಗಳನ್ನು ರಚಿಸಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸ್ ತಂಡ ತಲೆಮರೆಸಿಕೊಂಡಿದ್ದ ಆರೋಪಿಯ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದು, ಆರಕ್ಷಕರ ಈ ಯಶಸ್ವಿ ಕಾರ್ಯಾಚರಣೆಯನ್ನು ಹಿರಿಯ ಅಧಿಕಾರಿಗಳು ಶ್ಲಾಘಿಸಿ, ಬಹುಮಾನ ಘೋಷಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಸರಗೂರು ಪೊಲೀಸ್ ಠಾಣೆಯ ಪಿಎಸ್ಐ ಕಿರಣ, ಗೋಪಾಲ ಅಂತರಸಂತೆ ಠಾಣೆ ಪಿಎಸ್ಐ ಕುಮಾರ, ಸರಗೂರು ಠಾಣೆಯ ಕೃಷ್ಣಕುಮಾರ, ಶ್ರೀಕಂಠಸ್ವಾಮಿ ಹಾಗೂ ಸಿಬ್ಬಂದಿಗಳಾದ ಇಮ್ರಾನ್ ಅಹಮದ್, ಗೋಪಾಲ ಕೃಷ್ಣ, ಜಗದೀಶ್, ಸುನೀಲ್ ಕುಮಾರ್, ನವೀನ, ಸುನೀಲ್, ರಮೇಶ್, ವಿನಯ್, ದೇವರಾಜು, ನಂದೀಶ್, ಗಣೇಶ್, ಚಾಲಕರಾದ ಆನಂದ್, ಮತ್ತು ಶಿವಪ್ಪ ಹಾಗೂ ಮಹಿಳಾ ಮುಖ್ಯ ಪೇದೆ ಶೋಭಾ ಪಾಲ್ಗೊಂಡಿದ್ದರು.
Kshetra Samachara
05/04/2026 02:06 pm