ಚಿಕ್ಕಮಗಳೂರು: ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಮನೆಗಳ್ಳರ ಹಾವಳಿ ಮಿತಿಮೀರಿದ್ದು ಮಧ್ಯರಾತ್ರಿಯ ವೇಳೆ ಜನವಸತಿ ಪ್ರದೇಶಗಳಲ್ಲಿ ಒಂಟಿಯಾಗಿ ಸುಳಿದಾಡುವ ಕಳ್ಳರು, ಬೀಗ ಹಾಕಿದ ಮನೆಗಳನ್ನು ಗುರಿಯಾಗಿಸಿಕೊಂಡು ಕಳ್ಳತನಕ್ಕೆ ಯತ್ನಿಸುತ್ತಿರುವ ಘಟನೆಗಳು ವರದಿಯಾಗುತ್ತಿವೆ.
ಇತ್ತೀಚೆಗಷ್ಟೇ ನಗರದ ಟಿಪ್ಪು ನಗರದ ಸರ್ವೋದಯ ವಿದ್ಯಾಲಯ ರಸ್ತೆಯಲ್ಲಿರುವ ನಿಸಾರ್ ಎಂಬುವವರ ಮನೆಯಲ್ಲಿ ಕಳ್ಳತನಕ್ಕೆ ವಿಫಲ ಯತ್ನ ನಡೆದಿದೆ. ರಾತ್ರಿಯಿಡೀ ಮನೆಯ ಸುತ್ತಮುತ್ತ ಹೊಂಚು ಹಾಕಿದ್ದ ಖದೀಮನೊಬ್ಬ, ಬೆಳಗಿನ ಜಾವ ಕಾಂಪೌಂಡ್ ಹತ್ತಿ ಒಳನುಗ್ಗಿದ್ದಾನೆ. ಮನೆಯ ಬಾಗಿಲು ಮುರಿಯಲು ಹರಸಾಹಸ ಪಟ್ಟರೂ ಅದು ಸಾಧ್ಯವಾಗದ ಕಾರಣ ಅಂತಿಮವಾಗಿ ಬರಿಗೈಲಿ ವಾಪಸ್ ಓಡಿದ್ದಾನೆ. ಈ ದೃಶ್ಯಗಳೆಲ್ಲವೂ ಮನೆಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿದ್ದು, ಸದ್ಯ ಈ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಕೇವಲ ಟಿಪ್ಪು ನಗರ ಮಾತ್ರವಲ್ಲದೆ, ಗೌರಿ ಕಾಲುವೆ ಸುತ್ತಮುತ್ತಲಿನ ಬಡಾವಣೆಗಳಲ್ಲೂ ಕಳ್ಳರ ಕಾಟ ವಿಪರೀತವಾಗಿದೆ. ಕೆಲವು ಕಡೆಗಳಲ್ಲಿ ವಿದ್ಯುತ್ ಸಂಪರ್ಕವನ್ನೇ ಕಡಿತಗೊಳಿಸಿ ಕಳ್ಳತನ ಮಾಡುವ ನೂತನ ತಂತ್ರವನ್ನು ಕಳ್ಳರು ಅನುಸರಿಸುತ್ತಿರುವುದು ಸಾರ್ವಜನಿಕರ ನಿದ್ದೆಗೆಡಿಸಿದೆ. ಈ ಸಂಬಂಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ರಾತ್ರಿ ಗಸ್ತನ್ನು ಚುರುಕುಗೊಳಿಸಿದ್ದಾರೆ. ಸಾರ್ವಜನಿಕರು ಕೂಡ ತಮ್ಮ ಮನೆಗಳ ಸುರಕ್ಷತೆಯ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು ಮತ್ತು ಯಾವುದೇ ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕೆಂದು ಮನವಿ ಮಾಡಲಾಗಿದೆ.
PublicNext
05/04/2026 03:26 pm