ಭುವನೇಶ್ವರ: ಇತ್ತೀಚೆಗೆ ಭಾರತದ ಟೆಕ್ ದೈತ್ಯ ಒರಾಕಲ್ ಸಂಸ್ಥೆಯಲ್ಲಿ ಸಾವಿರಾರು ಸಿಬ್ಬಂದಿಯನ್ನು ವಜಾಗೊಳಿಸುವ "ಲೇಆಫ್ ಬಿರುಗಾಳಿ" ಬೀಸಿತ್ತು. ಈ ಆಘಾತಕಾರಿ ಬೆಳವಣಿಗೆಯ ನಡುವೆ, ಕೆಲಸ ಕಳೆದುಕೊಂಡ ಬೆಂಗಳೂರಿನ ಟೆಕ್ಕಿಯೊಬ್ಬರು ತಮ್ಮದೇ ಆದ ವಿಂಟೇಜ್ ಆರ್ಥಿಕ ಯೋಜನೆಯ ಮೂಲಕ, ಉದ್ಯೋಗವಿಲ್ಲದಿದ್ದರೂ ಮಾಸಿಕ ಕನಿಷ್ಠ 43,000 ರೂ.ಗಳನ್ನು ಗಳಿಸುತ್ತಿದ್ದಾರೆ ಎಂಬ ವರದಿಯೊಂದು ವ್ಯಾಪಕವಾಗಿ ವೈರಲ್ ಆಗುತ್ತಿದೆ.
ಹೌದು, ಸರಿಯಾದ ಆರ್ಥಿಕ ಯೋಜನೆಗಳನ್ನು ರೂಪಿಸಿಕೊಂಡರೆ, ಇಂತಹ ಅನಿರೀಕ್ಷಿತ ಕೆಲಸ ಕಡಿತದ ಸನ್ನಿವೇಶಗಳಲ್ಲೂ ಯಾವುದೇ ಅಡೆತಡೆಗಳಿಲ್ಲದೆ ಜೀವನ ನಡೆಸಬಹುದು ಎಂಬುದಕ್ಕೆ ಈ ಘಟನೆ ಉತ್ತಮ ಉದಾಹರಣೆಯಾಗಿದೆ. ಒರಾಕಲ್ನಲ್ಲಿ ಕೆಲಸ ಕಳೆದುಕೊಂಡಿದ್ದರೂ, ಈ ಉದ್ಯೋಗಿ ತಮ್ಮ ಕುಟುಂಬಕ್ಕೆ ಯಾವುದೇ ತೊಂದರೆಯಾಗದಂತೆ ಜೀವನ ಸಾಗಿಸುತ್ತಿದ್ದಾರೆ.
ನಾಯಕ್ ಸತ್ಯ ಎಂಬ ಎಕ್ಸ್ (ಹಿಂದಿನ ಟ್ವಿಟರ್) ಖಾತೆದಾರರು ಈ ಕುರಿತು ಪೋಸ್ಟ್ ಹಂಚಿಕೊಂಡಿದ್ದು, ತಮ್ಮ ಸ್ನೇಹಿತರೊಬ್ಬರು ಬೆಂಗಳೂರಿನ ಒರಾಕಲ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ, ಸಂಸ್ಥೆ ಅವರನ್ನು ಕೆಲಸದಿಂದ ವಜಾಗೊಳಿಸಿದೆ. ಕೆಲಸ ಕಳೆದುಕೊಂಡ ನಂತರವೂ, ಆತ ತಮ್ಮ ಆರ್ಥಿಕ ಸುರಕ್ಷತಾ ಜಾಲದೊಂದಿಗೆ ತಮ್ಮ ಹುಟ್ಟೂರಾದ ಭುವನೇಶ್ವರಕ್ಕೆ ಮರಳಿ, ಆರಾಮದಾಯಕ ಜೀವನ ನಡೆಸುತ್ತಿದ್ದಾರೆ ಎಂದು ಸತ್ಯ ವಿವರಿಸಿದ್ದಾರೆ. ಟೆಕ್ ಕ್ಷೇತ್ರದಲ್ಲಿ 14 ವರ್ಷಗಳ ಅನುಭವ ಹೊಂದಿದ್ದ ಈ ಮಾಜಿ ಒರಾಕಲ್ ಉದ್ಯೋಗಿ, ಹಠಾತ್ ವಜಾ ಸನ್ನಿವೇಶವನ್ನು ಅತ್ಯಂತ ಸಮಚಿತ್ತದಿಂದ ನಿರ್ವಹಿಸಿದ್ದಾರೆ. ಒತ್ತಡಕ್ಕೆ ಒಳಗಾಗುವ ಬದಲು, ಅವರು ತಮ್ಮ ಊರಾದ ಭುವನೇಶ್ವರಕ್ಕೆ ಮರಳುವ ನಿರ್ಧಾರ ಕೈಗೊಂಡಿರುವುದು ವಿಶೇಷ.
ಸತ್ಯ ಅವರು ಬರೆದಿರುವಂತೆ, ಅವರ ಸ್ನೇಹಿತ ಕೆಲಸದಲ್ಲಿದ್ದಾಗಲೇ ತಮ್ಮ ಪೋಷಕರು ಮತ್ತು ಪತ್ನಿಯ ಹೆಸರಿನಲ್ಲಿ ಸ್ಥಿರ ಠೇವಣಿ (FD) ಮಾಡಿಸಿದ್ದರು. ಅಂಚೆ ಕಚೇರಿಯ ಜಂಟಿ ಖಾತೆಗಳಲ್ಲಿ ಒಟ್ಟು 15 ಲಕ್ಷ ರೂ.ಗಳನ್ನು ಠೇವಣಿ ಇರಿಸಿದ್ದರು. ಒಂದು ಖಾತೆಯನ್ನು ಪೋಷಕರೊಂದಿಗೆ, ಇನ್ನೊಂದನ್ನು ಪತ್ನಿಯೊಂದಿಗೆ ಮಾಡಿಸಿದ್ದರು. ಇದರ ಜೊತೆಗೆ, ತಮ್ಮ ಮಗುವಿನ ಹೆಸರಿನಲ್ಲಿ ಹೆಚ್ಚುವರಿ ಠೇವಣಿಯನ್ನೂ ಹೂಡಿಕೆ ಮಾಡಿದ್ದರು. ಈ ಸ್ಥಿರ ಠೇವಣಿಗಳಿಂದ ಮಾಸಿಕ ಸುಮಾರು 28,000 ರೂ. ಬಡ್ಡಿ ರೂಪದಲ್ಲಿ ಆದಾಯ ಬರುತ್ತಿತ್ತು.
ಇದರ ಜೊತೆಗೆ, ಅವರು ಇಂಡಿಯನ್ ಬ್ಯಾಂಕ್ನಲ್ಲಿ ಸುಮಾರು 30 ಲಕ್ಷ ರೂ. ಮೌಲ್ಯದ ಸ್ಥಿರ ಠೇವಣಿ ಹೊಂದಿದ್ದರು. ಇದರಿಂದಲೂ ತಿಂಗಳಿಗೆ ಮತ್ತೊಂದು 15,000 ರೂ. ಆದಾಯ ಬರುತ್ತಿತ್ತು. ಹೀಗೆ, ಒಟ್ಟಾರೆಯಾಗಿ ಅವರಿಗೆ ತಿಂಗಳಿಗೆ ಸರಿಸುಮಾರು 43,000 ರೂ. ನಿಷ್ಕ್ರಿಯ ಆದಾಯ ಖಾತೆಗೆ ಜಮೆಯಾಗುತ್ತಿತ್ತು. ಈ ಸ್ಥಿರ ಆದಾಯವು ಅವರಿಗೆ ತಕ್ಷಣದ ಆರ್ಥಿಕ ಒತ್ತಡವಿಲ್ಲದೆ ತಮ್ಮನ್ನು ತಾಳಿಕೊಳ್ಳಲು ಸಾಧ್ಯವಾಯಿತು.
ಭುವನೇಶ್ವರದಲ್ಲಿ ಸ್ವಂತ ಮನೆ ಇದ್ದುದರಿಂದ, ಅವರಿಗೆ ಬಾಡಿಗೆ ಖರ್ಚು ಉಳಿದಿತ್ತು. ತಮ್ಮ ವೈಯಕ್ತಿಕ ಖರ್ಚುಗಳಿಗಾಗಿ, ಅವರು ತಮ್ಮ ಊರಿನಲ್ಲೇ ಉಬರ್ ಚಾಲಕನಾಗಿ ಕೆಲಸ ಮಾಡಲು ಪ್ರಾರಂಭಿಸಿದರು. ನಗರ ಜೀವನಕ್ಕೆ ಸಂಬಂಧಿಸಿದ ಯಾವುದೇ ಇಎಂಐ ಅಥವಾ ಸಾಲಗಳಿಲ್ಲದ ಕಾರಣ, ಅವರು ತಮ್ಮ ಮುಂದಿನ ಹಂತಗಳನ್ನು ಯೋಜಿಸುವತ್ತ ಗಮನಹರಿಸಲು ಸಾಧ್ಯವಾಯಿತು ಎಂದು ನಾಯಕ್ ಸತ್ಯ ಬರೆದುಕೊಂಡಿದ್ದಾರೆ. ಪೋಸ್ಟ್ ಪ್ರಕಾರ, ಅವರ ಸ್ನೇಹಿತ ಈಗ ಕುಟುಂಬದ ಬೆಂಬಲದೊಂದಿಗೆ ಸಣ್ಣ ವ್ಯಾಪಾರವನ್ನು ಪ್ರಾರಂಭಿಸುವ ಸಾಧ್ಯತೆಯನ್ನು ಅನ್ವೇಷಿಸುತ್ತಿದ್ದಾರೆ. ಈ ಪ್ರಯತ್ನವೂ ಯಶಸ್ವಿಯಾದರೆ, ಅದರಿಂದಲೂ ಒಂದಷ್ಟು ಆದಾಯ ಗಳಿಸಬಹುದು ಎಂದು ಅವರು ನಿರೀಕ್ಷಿಸಿದ್ದಾರೆ.
PublicNext
07/04/2026 03:25 pm