ಚಳ್ಳಕೆರೆ: ನಗರದ ಕಾಟಪ್ಪನಹಟ್ಟಿ ಗೊಲ್ಲರಹಟ್ಟಿ ಗ್ರಾಮದಲ್ಲಿ ದಶಕಗಳಿಂದ ಕಾಡುತ್ತಿದ್ದ ಕಲ್ಲುಕೊರಿ ಸಮಸ್ಯೆಗೆ ಕೊನೆಗೂ ಪರಿಹಾರ ಕಂಡುಕೊಳ್ಳುವ ದಿಸೆಯಲ್ಲಿ ಮಹತ್ವದ ಹೆಜ್ಜೆ ಇಡಲಾಗಿದೆ. ಗ್ರಾಮಸ್ಥರ ನಿರಂತರ ಮನವಿಗೆ ಸ್ಪಂದಿಸಿದ ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಅವರ ನೇತೃತ್ವದಲ್ಲಿ, ನಗರಸಭೆ ಆಯುಕ್ತೆ ನಾಗವೇಣಿ, ಇಂಜಿನಿಯರ್ ಲೋಕೇಶ್ ಹಾಗೂ ಮಾಜಿ ಸದಸ್ಯ ವೈ. ಪ್ರಕಾಶ್ ಅವರ ಸಹಯೋಗದಲ್ಲಿ ಹೊಂಡ ಮುಚ್ಚುವ ಕಾರ್ಯ ಆರಂಭವಾಗಿದೆ.
ಸುಮಾರು 50ಕ್ಕೂ ಹೆಚ್ಚು ವರ್ಷಗಳ ಹಿಂದೆ ನಿರ್ಮಾಣಗೊಂಡಿದ್ದ ಈ ಕಲ್ಲುಕೊರಿ ಹೊಂಡದಲ್ಲಿ ವರ್ಷಪೂರ್ತಿ ನೀರು ನಿಂತುಕೊಳ್ಳುತ್ತಿತ್ತು. ಇದರಿಂದ ಗ್ರಾಮದಲ್ಲಿ ಸೊಳ್ಳೆಗಳ ಹೆಚ್ಚಳ, ದುರ್ವಾಸನೆ ಹಾಗೂ ಅಸ್ವಚ್ಛ ಪರಿಸ್ಥಿತಿ ಉಂಟಾಗಿ ಜನಜೀವನ ದುಸ್ತರವಾಗಿತ್ತು. ಗ್ರಾಮಸ್ಥರು ಆರೋಗ್ಯ ಸಮಸ್ಯೆಗಳ ಭೀತಿಯಲ್ಲೇ ಬದುಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಜೊತೆಗೆ, ಈ ಪ್ರದೇಶದ ಕಾರಣದಿಂದ ಯಾರೂ ಮನೆಗಳಿಗೆ ಬರಲು ಸಹ ಇಚ್ಛಿಸದಂತಹ ವಾತಾವರಣ ಉಂಟಾಗಿತ್ತು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು.
ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಶಾಸಕರಿಗೆ ಮನವಿ ಸಲ್ಲಿಸಿದ್ದು, ತಕ್ಷಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಇದೀಗ ಬೆಂಗಳೂರು ರಸ್ತೆಯ ಕಟ್ಟಡ ತೆರವು ತ್ಯಾಜ್ಯವನ್ನು ಬಳಸಿಕೊಂಡು ಹೊಂಡವನ್ನು ಮುಚ್ಚುವ ಕಾರ್ಯ ಭರದಿಂದ ಸಾಗುತ್ತಿದೆ. ಈ ಕಾರ್ಯ ಪೂರ್ಣಗೊಂಡರೆ, ಗ್ರಾಮದಲ್ಲಿ ಸ್ವಚ್ಛತೆ ಹೆಚ್ಚಾಗಿ ಸೊಳ್ಳೆ ಕಾಟದಿಂದ ಮುಕ್ತಿ ಸಿಗುವ ನಿರೀಕ್ಷೆ ವ್ಯಕ್ತವಾಗಿದೆ.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಗೌಡ್ರು ನಾಗಣ್ಣ ಸೇರಿದಂತೆ ಹಲವರು ಶಾಸಕರಿಗೂ, ಸಂಬಂಧಪಟ್ಟ ಅಧಿಕಾರಿಗಳಿಗೂ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
Kshetra Samachara
21/04/2026 06:17 pm
LOADING...