ಚಿತ್ರದುರ್ಗ: ಜಿಲ್ಲೆಯ ಮಲ್ಲನಕಟ್ಟೆ ಮಜರೆ ಗ್ರಾಮದ ಕೊಡೈಯ್ಯನಹಟ್ಟಿಯಲ್ಲಿ ತಿರುಪತಿ ತಿಮ್ಮಪ್ಪಸ್ವಾಮಿ ಸೇವಾ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ತಿಮ್ಮಪ್ಪಸ್ವಾಮಿಯ ಗರುಡೋತ್ಸವ, ಕಲ್ಯಾಣೋತ್ಸವ ಹಾಗೂ ಬ್ರಹ್ಮ ರಥೋತ್ಸವವು ನೂರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ನೆರವೇರಿತು. ಏಪ್ರಿಲ್ 23 ರಿಂದ 26 ರವರೆಗೆ ನಡೆದ ಈ ಜಾತ್ರಾ ಮಹೋತ್ಸವವು ಭಕ್ತಿ ಸಡಗರಕ್ಕೆ ಸಾಕ್ಷಿಯಾಯಿತು.
ಜಾತ್ರೆಯ ಮೊದಲ ದಿನವಾದ ಏಪ್ರಿಲ್ 23 ರಂದು, ತಿರುಪತಿ ತಿಮ್ಮಪ್ಪ ಸ್ವಾಮಿಗೆ ಹೊಳೆ ಪೂಜೆ ಹಾಗೂ ಗಂಗಾ ಸ್ಥಾನ ಪೂಜಾ ಕೈಂಕರ್ಯಗಳು ಭಕ್ತಿಪೂರ್ವಕವಾಗಿ ಜರುಗಿದವು. ಏಪ್ರಿಲ್ 24 ರಂದು ದೇವಸ್ಥಾನದ ಆವರಣದಲ್ಲಿ ಭಕ್ತಾದಿಗಳಿಗೆ ಅನ್ನದಾಸೋಹ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಮರುದಿನ, ಅಂದರೆ ಏಪ್ರಿಲ್ 25 ರಂದು, ಗರುಡೋತ್ಸವ, ಕಲ್ಯಾಣೋತ್ಸವ ಹಾಗೂ ವಿಶೇಷ ಪೂಜೆಗಳು ವಿಜೃಂಭಣೆಯಿಂದ ನಡೆದವು.
ಜಾತ್ರೆಯ ಅಂತಿಮ ದಿನವಾದ ಏಪ್ರಿಲ್ 26 ರಂದು, ವಿವಿಧ ಬಣ್ಣ ಬಣ್ಣದ ಹೂಗಳಿಂದ ಸುಂದರವಾಗಿ ಅಲಂಕೃತಗೊಂಡ ಬ್ರಹ್ಮರಥೋತ್ಸವವು ನೂರಾರು ಭಕ್ತರ ನಡುವೆ ವೈಭವದಿಂದ ಜರುಗಿತು. ತಿರುಪತಿ ತಿಮ್ಮಪ್ಪನ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿದ ಭಕ್ತರು, ಅನವರತ 'ಗೋವಿಂದಾ ಗೋವಿಂದಾ' ಎಂಬ ಭಕ್ತಿ ಘೋಷಣೆಯೊಂದಿಗೆ ರಥವನ್ನು ಎಳೆದು ಪುನೀತರಾದರು. ಈ ಮೂಲಕ ನಾಲ್ಕು ದಿನಗಳ ಜಾತ್ರಾ ಮಹೋತ್ಸವಕ್ಕೆ ತೆರೆ ಬಿತ್ತು.
Kshetra Samachara
26/04/2026 07:22 pm
LOADING...