ಪಬ್ಲಿಕ್ ನೆಕ್ಸ್ಟ್ ವಿಶೇಷ
ಬೆಳಗಾವಿ: ರಾಜ್ಯದಲ್ಲಿ ಬಿಸಿಲಿನ ತಾಂಡವ ಹೆಚ್ಚಾಗಿದೆ. ಜನರು ಈ ಬಿಸಿಲಿನ ಕಾರಣದಿಂದ ಕಂಗೆಟ್ಟಿದ್ದಾರೆ. ಅದರಲ್ಲೂ ಬೆಳಗಾವಿ ಈಗ ಅಕ್ಷರಶಃ ಕೆಂಡದಂತಾಗಿದೆ. ಕಳೆದ ಒಂದು ವಾರದಿಂದ ಜಿಲ್ಲೆಯಾದ್ಯಂತ ಸೂರ್ಯನ ಅಬ್ಬರ ಜಾಸ್ತಿ ಆಗಿದೆ. ಅತಿಯಾದ ಬಿಸಿಲು ಮತ್ತು ಬಿಸಿಗಾಳಿಗೆ ಜನ ಬಳಲಿ ಬೆಂಡಾಗಿದ್ದಾರೆ.
ಜಿಲ್ಲೆಯ ತಾಪಮಾನವು 39 ಡಿಗ್ರಿ ಸೆಲ್ಸಿಯಸ್ ಗಡಿಯನ್ನು ತಲುಪಿದ್ದು, ಮುಂದಿನ ವಾರ ಮತ್ತಷ್ಟು ಹೆಚ್ಚಲಿದೆ. ಈ ಬಿಸಿಲಿನ ತಾಪದಿಂದ ನಮ್ಮ ಆರೋಗ್ಯ ಸಹ ಹಾಳಾಗುತ್ತದೆ. ಹಾಗಾಗಿ ಬಿಸಿಲಿನಲ್ಲಿ ಆರೋಗ್ಯವನ್ನ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ದಿನದಿಂದ ದಿನಕ್ಕೆ ತಾಪಮಾನ ಏರಿಕೆಯಾಗುತ್ತಿದ್ದು ಬಿಸಿಲಿನ ತಾಪದ ಜೊತೆಗೆ ವಿವಿಧ ಸೋಂಕುಗಳು ಹರಡುವ ಭೀತಿ ಎದುರಾಗಿದೆ.
ಬಿಸಿಲಿನಿಂದ ಬಳಲಿ ನೀರಿನ ಅಂಶ ಕಡಿಮೆ ಆಗಲಿದೆ. ಇದರಿಂದ ಹಿಟ್ ಸ್ಟ್ರೋಕ್ ಹೆಚ್ಚಾಗಲಿದೆ. ಇದರಿಂದ ಎಚ್ಚರ ತಪ್ಪುವುದು, ಮೂರ್ಚೆ ಹೋಗುವುದು, ಸುಸ್ತಾಗು ಲಕ್ಷಣಗಳು ಕಾಣಲಿದೆ. ಬಿಸಿಲು ಹೆಚ್ಚಾದಂತೆ ಮಕ್ಕಳಿಗೆ, ವೃದ್ಧರಿಗೆ , ಗರ್ಭಿಣಿಯರಿಗೆ, ಡಯಾಬಿಟಿಸ್, ಕಾಯಿಲೆ ಹೆಚ್ಚು ಇರುವರಿಗೆ ಹೆಚ್ಚು ಸಮಸ್ಯೆ ಆಗಲಿದೆ.
ಸಮಸ್ಯೆ ಆಗದಂತೆ ನೋಡಿಕೊಳ್ಳಲು ದೇಹದಲ್ಲಿ ನೀರಿನ ಅಂಶ ಕಡಿಮೆಯಾಗದಂತೆ ನೋಡಿಕೊಳ್ಳಬೇಕು. ಈ ಸಮಯದಲ್ಲಿ ಬಹಳ ಮುಖ್ಯ ಬಾಯಾರಿಕೆಯಾಗದಿದ್ದರೂ ಸಾಕಷ್ಟು ಪ್ರಮಾಣದಲ್ಲಿ ಶುದ್ಧ ನೀರು, ಮಜ್ಜಿಗೆ, ರಾಗಿ ಗಂಜಿ ಮತ್ತು ತಾಜಾ ಹಣ್ಣಿನ ಜ್ಯೂಸ್ ಸೇವಿಸುತ್ತಿರಬೇಕು. ರೋಗನಿರೋಧಕ ಶಕ್ತಿ ಹೆಚ್ಚಿಸುವ ತಾಜಾ ಹಣ್ಣು ಮತ್ತು ತರಕಾರಿಗಳನ್ನು ಹೆಚ್ಚಾಗಿ ಸೇವಿಸಬೇಕು.
ಕಾರ್ಬೋನೆಟೆಡ್ ನೀರು, ತಂಪುಪಾನಿಯಗಳು ಬಳಸಬಾರದು, ಮದ್ಯ ಸೇವನೆ ಮಾಡಬಾರದು, ಬಿಸಿಲಿನಲ್ಲಿ ಮದ್ಯ ಸೇವನೆ ಮಾಡಿದರೆ ಸಮಸ್ಯೆಗಳು ಹೆಚ್ಚಾಗಲಿದೆ. ಬಿಸಿಲು ಇರುವ ಸಮಯದಲ್ಲಿ ಶ್ರಮದಾಯಕ ಕೆಲಸ ಮಾಡಬಾರದು. ಕಾರ್ಮಿಕರು, ರೈತರು ಈ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಸಾಧ್ಯ ಆದಷ್ಟು ಬೆಳಗ್ಗೆ ಸಾಯಂಕಾಲ ಕೆಲಸ ಮಾಡುವುದರಿಂದ ಬಿಸಿಲಿನ ತಾಪದಿಂದ ನಮ್ಮನ್ನ ನಾವು ರಕ್ಷಣೆ ಮಾಡಿಕೊಳ್ಳಬಹುದು
ಒಟ್ಟಿನಲ್ಲಿ ಇನ್ನು ಒಂದು ತಿಂಗಳ ಕಾಲ ಬಿಸಿಲಿನ ತಾಪ ಜನರಿಗೆ ತೊಂದರೆ ನೀಡಲಿದ್ದು, ಆರೋಗ್ಯ ಇಲಾಖೆಯ ಸಲಹೆ ಸೂಚನೆಗಳನ್ನು ಜನರು ಪಾಲನೆ ಮಾಡಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.
ಪ್ರಲ್ಹಾದ ಪೂಜಾರಿ, ಪಬ್ಲಿಕ್ ನೆಕ್ಸ್ಟ್, ಬೆಳಗಾವಿ
PublicNext
23/04/2026 01:31 pm