ಶಿರಸಿ: ಸಿದ್ಧವಾಗಿದ್ದ ಮದುವೆ ಮಂಟಪ, ನೆರೆದಿದ್ದ ಸಂಬಂಧಿಕರು, ವಿವಾಹ ಮಹೋತ್ಸವಕ್ಕೆ ಕ್ಷಣಗಣನೆ. ಆದರೆ, ನಿಗದಿತ ಶುಭ ಗಳಿಗೆಯಲ್ಲಿ ವಧು ಮಂಟಪಕ್ಕೆ ಬಾರದೆ ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ. ಮದುವೆ ಮಂಟಪಕ್ಕೆ ಬರದೆ ವಧು ಪ್ರಿಯಕರನೊಂದಿಗೆ ಪರಾರಿಯಾಗಿದ್ದು, ವರನ ಕಡೆಯವರು ಬಸವಳಿದು, ಮಾಡಿದ ಸಿದ್ಧತೆ ಹಾಗೂ ಲಕ್ಷಾಂತರ ರೂಪಾಯಿ ವೆಚ್ಚ ನೀರಲ್ಲಿ ಹೋಮ ಮಾಡಿದಂತಾಗಿದೆ. ಈ ಅನಿರೀಕ್ಷಿತ ಘಟನೆ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ನಗರದ ಮುಸ್ಲಿಂಗಲ್ಲಿ ನಿವಾಸಿ ಜಹೀರ್ ಖಾನ್ ಅವರ ಪುತ್ರಿ ಸಿಫಾ ಅವರ ಮದುವೆಯನ್ನು ನಗರದ ಹುಸರಿ ರಸ್ತೆಯ ಎವರ್ಗ್ರೀನ್ ಹಾಲ್ನಲ್ಲಿ ಶನಿವಾರ ನಿಗದಿಪಡಿಸಲಾಗಿತ್ತು. ಶುಕ್ರವಾರ ರಾತ್ರಿವರೆಗೂ ಪಾಲಕರ ಜೊತೆಯಲ್ಲೇ ಇದ್ದ ಯುವತಿ, ಶನಿವಾರ ನಡೆಯಬೇಕಿದ್ದ ಮದುವೆಗೆ ಬಾರದೆ ಈ ಅವಾಂತರಕ್ಕೆ ಕಾರಣಳಾಗಿದ್ದಾಳೆ. ಯುವತಿ ನಸುಕಿನ 1 ಗಂಟೆಯಿಂದ 4 ಗಂಟೆಯೊಳಗೆ ನಾಪತ್ತೆಯಾಗಿದ್ದಾಳೆ ಎಂದು ಆಕೆಯ ತಂದೆ ಜಹೀರ್ ಖಾನ್ ಅವರು ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈಗಾಗಲೇ ಯುವತಿಯ ನಿಶ್ಚಿತಾರ್ಥ ವರನೊಂದಿಗೆ ನಡೆದಿತ್ತು. ಎರಡೂ ಕಡೆಯ ಸಂಬಂಧಿಕರು ಎವರ್ಗ್ರೀನ್ ಹಾಲ್ನಲ್ಲಿ ಮದುವೆಗೆ ಭರದಿಂದ ಸಿದ್ಧತೆ ನಡೆಸಿದ್ದರು. ಆದರೆ, ನಸುಕಿನಲ್ಲಿ ನಾಪತ್ತೆಯಾದ ವಧು ಮದುವೆ ಹಾಲ್ಗೆ ಬಾರದೇ ಇರುವ ಕಾರಣದಿಂದ ಗಂಡಿನ ಕಡೆಯವರು ಮತ್ತು ಹೆಣ್ಣಿನ ಕಡೆಯವರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ ಎಂದು ತಿಳಿದುಬಂದಿದೆ.
ಹಾಲ್ ಬುಕ್ ಮಾಡಿದ್ದು, ಚಿನ್ನಾಭರಣ ಖರೀದಿ, ಊಟದ ತಯಾರಿಯಂತಹ ಸಿದ್ಧತೆಗಳಿಗಾಗಿ ಸುಮಾರು 15 ರಿಂದ 20 ಲಕ್ಷ ರೂಪಾಯಿ ಖರ್ಚು ಮಾಡಿದ್ದಾಗಿ ವರನ ಕಡೆಯವರು ಅಳಲು ತೋಡಿಕೊಳ್ಳುತ್ತಿದ್ದಾರೆ. ನಾಪತ್ತೆಯಾದ ಯುವತಿ ತನ್ನ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದು, ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಈ ಕುರಿತು ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯ ಪಿಎಸ್ಐ ಬಸವರಾಜ್ ಕನಶೆಟ್ಟಿ ಅವರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
Kshetra Samachara
25/04/2026 08:16 pm