ಗುಂಡ್ಲುಪೇಟೆ : ತಾಲ್ಲೂಕಿನ ವಿವಿಧೆಡೆ ಟಿಪ್ಪರ್ ಲಾರಿಗಳಿಂದ ಸಂಭವಿಸುತ್ತಿರುವ ಅಪಘಾತಗಳು ಮತ್ತು ಪ್ರಾಣಹಾನಿಗೆ ಚಾಲಕರು ಮದ್ಯ ಸೇವನೆ ಹಾಗೂ ಮೊಬೈಲ್ ಬಳಕೆ ಮಾಡುತ್ತಿರುವುದೇ ಪ್ರಮುಖ ಕಾರಣ ಎಂಬ ಸಾರ್ವಜನಿಕರ ಆರೋಪಕ್ಕೆ ಇದೀಗ ಖಚಿತ ಪುರಾವೆ ದೊರೆತಿದೆ.
ಸಾಕ್ಷಿ ಸಮೇತ ಸಿಕ್ಕಿಬಿದ್ದ ಚಾಲಕ
ಕೇರಳದಿಂದ ಬಂದ ಟಿಪ್ಪರ್ ಚಾಲಕನೋರ್ವ ಮದ್ಯದ ಪೌಚ್ಗಳನ್ನು ಖರೀದಿಸಿ ಲಾರಿ ಚಾಲನೆ ಮಾಡಿ ಮುಂದೆ ಸಾಗಿದ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.
ಈ ಚಾಲಕ ಅಲ್ಲೇ ಮದ್ಯ ಸೇವಿಸಿ ಖಾಲಿ ಪ್ಯಾಕೆಟ್ಗಳನ್ನು ಎಸೆದು, ಇನ್ನೂ ನಾಲ್ಕೈದು ಪ್ಯಾಕೆಟ್ಗಳನ್ನು ಕೊಂಡೊಯ್ಯುತ್ತಿರುವುದು ದೃಶ್ಯದಲ್ಲಿ ಸ್ಪಷ್ಟವಾಗಿ ದಾಖಲಾಗಿದೆ. ಈ ಘಟನೆ ಅಧಿಕಾರಿಗಳಿಗೆ ಕೇರಳಿಗರ ಮೇಲೆ ಇರುವ ಮೃದು ಧೋರಣೆಯನ್ನು ಬಟಾಬಯಲು ಮಾಡಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಉಪಾಧ್ಯಕ್ಷ ರಾಜೇಂದ್ರ ನಾಯಕ್ ಗಂಭೀರ ಆರೋಪ ಮಾಡಿದ್ದಾರೆ.
ಅಧಿಕಾರಿಗಳ ಮೌನಕ್ಕೆ ಆಕ್ರೋಶ
ಮದ್ಯ ಸೇವಿಸಿ ಭಾರಿ ಗಾತ್ರದ ಟಿಪ್ಪರ್ಗಳನ್ನು ಚಲಾಯಿಸುವಾಗ ನಶೆಯಲ್ಲಿ ಬೇಕಾಬಿಟ್ಟಿ ಸಂಚರಿಸುವುದರಿಂದಲೇ ಪದೇಪದೇ ಅಪಘಾತ ಪ್ರಕರಣಗಳು ಮರುಕಳಿಸುತ್ತಿವೆ. ಇಷ್ಟೆಲ್ಲಾ ನಡೆಯುತ್ತಿದ್ದರೂ, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ತಮ್ಮದಲ್ಲದ ಉಸಾಬರಿ ಎಂಬಂತೆ ಮೌನವಹಿಸಿ ಎಂ-ಸ್ಯಾಂಡ್ ಮಾಫಿಯಾಗೆ ಪರೋಕ್ಷವಾಗಿ ಬೆಂಬಲ ನೀಡುತ್ತಿರುವುದು ವಿಷಾದಕರ ಎಂದು ರಾಜೇಂದ್ರ ನಾಯಕ್ ಬೇಸರ ಹೊರಹಾಕಿದ್ದಾರೆ.
ಶಿವಕುಮಾರ್ ಪಬ್ಲಿಕ್ ನೆಕ್ಸ್ಟ್, ಗುಂಡ್ಲುಪೇಟೆ
PublicNext
04/05/2026 10:47 am
LOADING...