ಕೊಳ್ಳೇಗಾಲ : ಬಂಗಾರದ ವಿಚಾರಕ್ಕೆ ನಡೆದ ಮಾತಿನ ಚಕಮಕಿ ಎರಡು ಕುಟುಂಬಗಳ ನಡುವೆ ಪರಸ್ಪರ ಚಾಕು ಇರಿತದಲ್ಲಿ ಕೊನೆಗೊಂಡಿರುವ ಘಟನೆ ಕೊಳ್ಳೇಗಾಲ ಪಟ್ಟಣದಲ್ಲಿ ನಡೆದಿದೆ.
ಕೊಳ್ಳೇಗಾಲ ಪಟ್ಟಣದ ಆರ್ ಎಂ ಕಲ್ಯಾಣ ಮಂಟಪದಲ್ಲಿ ಮುದಾಸೀರ್ ಹಾಗೂ ಗುಲ್ಜಾರ್ ಭಾನು ಎಂಬವರ ವಿವಾಹ ಗುರುಹಿರಿಯರ ಸಮ್ಮತಿಯಂತೆ ನಿಶ್ಚಯವಾಗಿತ್ತು. ಆದರೆ ಬಂಗಾರದ ವಿಚಾರದಲ್ಲಿ ಕಲ್ಯಾಣ ಮಂಟಪದಲ್ಲೇ ಗಲಾಟೆ ನಡೆದಿದೆ.
ಇಂದು ವಧುವಿನ ಸ್ವಗೃಹಕ್ಕೆ ಮಾತುಕತೆ ಇತ್ಯರ್ಥಕ್ಕೆ ತೆರಳಿದ್ದ ವರನ ಕಡೆಯವರ ನಡುವೆ ಮಾತಿನ ವಾಗ್ವಾದ ಶುರುವಾಗಿ ವಿಕೋಪಕ್ಕೆ ತಿರುಗಿ, ಎರಡು ಕುಟುಂಬ ಸದಸ್ಯರ ನಡುವೆ ಮಾರಾಮಾರಿ ನಡೆದಿದೆ.
ಪರಸ್ಪರ ಬಡಿಗೆಗಳಿಂದ ಹೊಡೆದಾಡಿಕೊಂಡಿದ್ದಲ್ಲದೆ, ಚಾಕು ಇರಿತಕ್ಕೊಳಗಾಗಿದ್ದಾರೆ. ಈ ಘಟನೆಯಲ್ಲಿ ವರನ ಸೋದರ ಸಂಬಂಧಿಗಳಾದ ಸಮೀರ್ ಆಯಾಜ್, ಶೋಯೆಬ್ ಮತ್ತು ವಧುವಿನ ಕಡೆಯವರಾದ ಪೈರೋಜ್ ಖಾನ್, ಅಬ್ದುಲ್ ವಾಹಿದ್, ಆರೀಫ್ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ನಾವು ಬಂಗಾರಕ್ಕಾಗಿ ಯಾವುದೇ ಡಿಮ್ಯಾಂಡ್ ಮಾಡಿಲ್ಲ, ನಾನು ಮತ್ತು ಮುದಾಸೀರ್ ಕಳೆದ ಮೂರು ವರ್ಷಗಳಿಂದ ಪ್ರೀತಿ ಮಾಡುತ್ತಿದ್ವಿ, ಮಾತುಕತೆಯಂತೆ ಮದುವೆಗೆ ಬೈಕ್ ಕೊಡಲು ಒಪ್ಪಿದ್ದೆವು. ಆದ್ರೆ ಬೈಕ್ ಬದಲಾಗಿ 15 ಲಕ್ಷ ಬೆಲೆಯ ಕಾರು ಬೇಕೆಂದು ಒತ್ತಡ ಹೇರಿದ್ರು. ಅದಕ್ಕೆ ಮದುವೆ ಬೇಡ ಅಂತ ಕ್ಯಾನ್ಸಲ್ ಮಾಡಿದ್ವಿ, ಆದರೆ ಮಾತುಕತೆಗೆಂದು ಬಂದವರು ನಮ್ಮ ಮೇಲೆಯೇ ಹಲ್ಲೆ ನಡೆಸಿ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ವಧು ಗುಲ್ಜಾರ್ ಭಾನು ಹಾಗೂ ಸಹೋದರ ಅನ್ವರ್ ಪಾಷಾ ಹೇಳಿಕೆ ನೀಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಳ್ಳೇಗಾಲ ಪಟ್ಟಣ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
PublicNext
29/04/2026 06:19 pm
LOADING...