ಅಮೃತಸರ : ಪಂಜಾಬ್ನಲ್ಲಿ ಆತಂಕ ಸೃಷ್ಟಿಸಿರುವ ಎರಡು ಪ್ರತ್ಯೇಕ ಸ್ಫೋಟಗಳ ಘಟನೆಗಳು ವರದಿಯಾಗಿವೆ. ಮಂಗಳವಾರ ರಾತ್ರಿ ಜಲಂದರ್ನ ಬಿಎಸ್ಎಫ್ ಪ್ರಧಾನ ಕಚೇರಿ ಬಳಿ ಮತ್ತು ಅಮೃತಸರದ ಸೇನಾ ಶಿಬಿರದ ಹೊರಭಾಗದಲ್ಲಿ ಸ್ಫೋಟಗಳು ಸಂಭವಿಸಿವೆ.
ಪಂಜಾಬ್ನ ಜಲಂದರ್ ಮತ್ತು ಅಮೃತಸರದಲ್ಲಿ ಭದ್ರತಾ ಪಡೆಗಳ ನೆಲೆಗಳ ಸಮೀಪ ಎರಡು ಪ್ರತ್ಯೇಕ ಸ್ಫೋಟಗಳು ಸಂಭವಿಸಿದ್ದು, ರಾಜ್ಯಾದ್ಯಂತ ಭದ್ರತಾ ಕಟ್ಟೆಚ್ಚರ ಘೋಷಿಸಲಾಗಿದೆ. ಪಂಜಾಬ್ ಪೊಲೀಸರು ಮತ್ತು ಕೇಂದ್ರ ಭದ್ರತಾ ಪಡೆಗಳು ಘಟನೆಗಳ ಕುರಿತು ತೀವ್ರ ತನಿಖೆ ಆರಂಭಿಸಿವೆ.
ಜಲಂದರ್ನಲ್ಲಿ ಬಿಎಸ್ಎಫ್ ಕಚೇರಿ ಬಳಿ ಸ್ಫೋಟ
ಮೇ 5ರ ಮಂಗಳವಾರ ರಾತ್ರಿ ಜಲಂದರ್ನಲ್ಲಿರುವ ಗಡಿ ಭದ್ರತಾ ಪಡೆಯ ಪ್ರಧಾನ ಕಚೇರಿ ಬಳಿ ನಿಲ್ಲಿಸಿದ್ದ ಸ್ಕೂಟರ್ನಲ್ಲಿ ಭಾರಿ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಸ್ಕೂಟರ್ಗೆ ಬೆಂಕಿ ಹತ್ತಿಕೊಂಡು ಉರಿಯಲಾರಂಭಿಸಿತು. ಈ ಅನಿರೀಕ್ಷಿತ ಘಟನೆಯಿಂದ ಸುತ್ತಮುತ್ತಲಿನ ಜನರಲ್ಲಿ ಭೀತಿ ಆವರಿಸಿತ್ತು. ಅದೃಷ್ಟವಶಾತ್, ಈ ಸ್ಫೋಟದಲ್ಲಿ ಯಾರಿಗೂ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಜಲಂದರ್ ಪೊಲೀಸ್ ಕಮಿಷನರ್ ಧನ್ ಪ್ರೀತ್ ಕೌರ್ ಅವರು, ಸ್ಫೋಟಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಯುತ್ತಿದ್ದು, ಸ್ಕೂಟರ್ನ ಮಾಲೀಕ ಮತ್ತು ಅದರ ಬಳಿ ಇದ್ದ ಮತ್ತೊಬ್ಬ ವ್ಯಕ್ತಿಯನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಅಮೃತಸರದಲ್ಲಿ ಗ್ರೆನೇಡ್ ದಾಳಿ
ಜಲಂದರ್ ಸ್ಫೋಟದ ಕೆಲವೇ ಗಂಟೆಗಳ ನಂತರ, ಅಮೃತಸರದ ಖಾಸ್ ಪ್ರದೇಶದಲ್ಲಿರುವ ಸೇನಾ ಶಿಬಿರದ ಹೊರಭಾಗದಲ್ಲಿ ಎರಡನೇ ಸ್ಫೋಟ ಸಂಭವಿಸಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, ಮೋಟಾರ್ಸೈಕಲ್ನಲ್ಲಿ ಬಂದ ದುಷ್ಕರ್ಮಿಯೊಬ್ಬ ಸೇನಾ ಶಿಬಿರದ ಹೊರಭಾಗಕ್ಕೆ ಗ್ರೆನೇಡ್ ದಾಳಿ ನಡೆಸಿದ್ದಾನೆ. ಈ ಸ್ಥಳವು ಅಟ್ಟಾರಿ-ವಾಘಾ ಅಂತರರಾಷ್ಟ್ರೀಯ ಗಡಿಯಿಂದ ಸುಮಾರು 15 ಕಿ.ಮೀ ದೂರದಲ್ಲಿದೆ.
ಅಮೃತಸರದ ಗ್ರಾಮೀಣ ಪೊಲೀಸ್ ವರಿಷ್ಠಾಧಿಕಾರಿ ಆದಿತ್ಯ ವಾರಿಯರ್ ಅವರು, ಮಂಗಳವಾರ ರಾತ್ರಿ 10:30 ರಿಂದ 11 ಗಂಟೆಯ ನಡುವೆ ಸೇನಾ ಶಿಬಿರದ ಹೊರಭಾಗದಲ್ಲಿ ಸ್ಫೋಟ ಸಂಭವಿಸಿದೆ ಎಂದು ಖಚಿತಪಡಿಸಿದ್ದಾರೆ.
ಘಟನೆ ನಡೆದ ತಕ್ಷಣ ಸೇನಾ ಅಧಿಕಾರಿಗಳು, ಪೊಲೀಸರು ಮತ್ತು ವಿಧಿವಿಜ್ಞಾನ ತಂಡಗಳು ಸ್ಥಳಕ್ಕೆ ಧಾವಿಸಿ ಕೂಲಂಕಷ ಪರಿಶೀಲನೆ ನಡೆಸುತ್ತಿವೆ.
ಈ ಎರಡು ಸ್ಫೋಟಗಳ ಹಿನ್ನೆಲೆಯಲ್ಲಿ ಇಡೀ ರಾಜ್ಯದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಪಂಜಾಬ್ ಪೊಲೀಸರು ಮತ್ತು ಕೇಂದ್ರ ಭದ್ರತಾ ಪಡೆಗಳು ಈ ಘಟನೆಗಳ ಹಿಂದಿರುವ ಉದ್ದೇಶ ಮತ್ತು ದುಷ್ಕರ್ಮಿಗಳನ್ನು ಪತ್ತೆಹಚ್ಚಲು ತೀವ್ರವಾಗಿ ಕಾರ್ಯಪ್ರವೃತ್ತವಾಗಿವೆ.
PublicNext
06/05/2026 10:49 am