ಚಿಕ್ಕಮಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ಚುನಾವಣಾ ಮರು ಎಣಿಕೆ ಫಲಿತಾಂಶದ ಬೆನ್ನಲ್ಲೇ ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಸೃಷ್ಟಿಯಾಗಿದೆ. ಅಂಚೆ ಮತಗಳ ಮರು ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಗೆಲುವು ಸಾಧಿಸಿರುವುದರ ಹಿಂದೆ ದೊಡ್ಡ ಮಟ್ಟದ 'ಚುನಾವಣಾ ಅಕ್ರಮ' ನಡೆದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೇರ ಆರೋಪ ಮಾಡಿದ್ದಾರೆ.
ಇದಕ್ಕೆ ತಿರುಗೇಟು ನೀಡಿರುವ ಸಿ.ಟಿ ರವಿ, ತಾವು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಸಮಯದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಐದು ಸ್ಥಾನಗಳಲ್ಲಿ ಸೋತಿದ್ದನ್ನು ಉಲ್ಲೇಖಿಸಿ ಅಂದು ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೂ ಅಧಿಕಾರ ದುರುಪಯೋಗಪಡಿಸಿಕೊಳ್ಳಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಒಂದು ವೇಳೆ ಅಂದು ಅಧಿಕಾರ ದುರುಪಯೋಗವಾಗಿದ್ದರೆ ಸೋಲುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟರು. ನ್ಯಾಯಾಲಯದ ಆದೇಶದಂತೆ ನಡೆದ ಮತಗಳ ಮರು ಎಣಿಕೆ ಪ್ರಕ್ರಿಯೆಯನ್ನು ಸಮರ್ಥಿಸಿದ ಅವರು, ಪ್ರಸ್ತುತ ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿರುವಾಗ ಮತಪೆಟ್ಟಿಗೆಗಳ ರಕ್ಷಣೆ ಮತ್ತು ಕಸ್ಟೋಡಿಯನ್ ಜವಾಬ್ದಾರಿ ಸರ್ಕಾರದ ಮೇಲೆಯೇ ಇರುತ್ತದೆ ಎಂದು ನೆನಪಿಸಿದರು.
ಮತದಾನದಲ್ಲಿ ಅಕ್ರಮ ಅಥವಾ ಮತ ದರೋಡೆ ನಡೆದಿದೆ ಎಂಬ ಮುಖ್ಯಮಂತ್ರಿಗಳ ಆರೋಪಕ್ಕೆ ತಿರುಗೇಟು ನೀಡಿದ ಅವರು, "ಇಂಟೆಲಿಜೆನ್ಸ್ ಮತ್ತು ಪೊಲೀಸ್ ಇಲಾಖೆ ನಿಮ್ಮ ಕೈಯಲ್ಲೇ ಇರುವಾಗ ಅಕ್ರಮ ಎಸಗಿದವರು ಯಾರು ಎಂಬುದನ್ನು ನೀವೇ ಪತ್ತೆ ಹಚ್ಚಬೇಕು" ಎಂದು ಸವಾಲು ಹಾಕಿದರು. ಸುಮ್ಮನೆ ಆರೋಪ ಮಾಡುವ ಬದಲು, ಅಕ್ರಮ ನಡೆದ ಬಗ್ಗೆ ಸ್ಪಷ್ಟ ಪುರಾವೆಗಳಿದ್ದರೆ ನ್ಯಾಯಾಲಯ ಅಥವಾ ಚುನಾವಣಾ ಆಯೋಗಕ್ಕೆ ಸಲ್ಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಅವರು ಒತ್ತಾಯಿಸಿದರು.
ಚುನಾವಣೆಯಲ್ಲಿ ಗೆದ್ದಾಗ ಬೀಗದೆ ಮತ್ತು ಸೋತಾಗ ಬಗ್ಗದೆ ಕೆಲಸ ಮಾಡುವುದು ತಮ್ಮ ಸಿದ್ಧಾಂತ ಎಂದು ಹೇಳುತ್ತಾ, ಅಕ್ರಮದ ಮೂಲಕ ಶಾಸಕರಾಗುವ ಅವಶ್ಯಕತೆ ತಮಗಿಲ್ಲ ಎಂದು ಅವರು ವಾಗ್ದಾಳಿ ನಡೆಸಿದ್ರು.
PublicNext
06/05/2026 11:27 am
LOADING...