ಚಿಕ್ಕಮಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ರಾಜಕೀಯ ಇತಿಹಾಸದಲ್ಲಿ ಯಾರೂ ಊಹಿಸದ ಮಹತ್ವದ ತಿರುವು ಸಿಕ್ಕಿದ್ದು, ಅಂಚೆ ಮತಗಳ ಮರು ಎಣಿಕೆಯಲ್ಲಿ ಜಯಭೇರಿ ಬಾರಿಸುವ ಮೂಲಕ ಡಿ.ಎನ್. ಜೀವರಾಜ್ ನೂತನ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಕಳೆದ ಮೂರು ವರ್ಷಗಳಿಂದ ಸತತವಾಗಿ ನಡೆಸಿದ ಕಾನೂನು ಹೋರಾಟಕ್ಕೆ ಅಂತಿಮ ಜಯ ಸಿಕ್ಕಂತಾಗಿದ್ದು, ಈ ಸುದೀರ್ಘ ಪಯಣದಲ್ಲಿ ಬಿಜೆಪಿ ಕಾರ್ಯಕರ್ತರು ಜೀವರಾಜ್ ಪರವಾಗಿ ಬೆನ್ನೆಲುಬಾಗಿ ನಿಂತಿದ್ದರು.
ಇನ್ನು ಈ ರಾಜಕೀಯ ಗೆಲುವಿನ ಜೊತೆಗೇ ದೈವಬಲದ ಕುರಿತಾದ ಸ್ವಾರಸ್ಯಕರ ಸಂಗತಿಯೊಂದು ಈಗ ಮಲೆನಾಡಿನಾದ್ಯಂತ ಭಾರೀ ಸಂಚಲನ ಸೃಷ್ಟಿಸಿದೆ. ಜೀವರಾಜ್ ಅವರು ಕಾನೂನು ಸಂಕಷ್ಟಗಳಿಂದ ಪಾರಾಗಿ ಶಾಸಕ ಸ್ಥಾನ ಅಲಂಕರಿಸಲಿ ಎಂದು ಬಾಳೆಹೊನ್ನೂರಿನ ಹಿಂದೂ ಕಾರ್ಯಕರ್ತ ಜಗದೀಶ್ ಅವರು ಶಬರಿಮಲೆಯ ಸನ್ನಿಧಿಯಲ್ಲಿ ವಿಶೇಷ ಹರಕೆ ಹೊತ್ತಿದ್ದರು.
ಮಕರ ಜ್ಯೋತಿಯ ದರ್ಶನದ ವೇಳೆ ಜೀವರಾಜ್ ಅವರ ಭಾವಚಿತ್ರವನ್ನಿಟ್ಟು ಕಣಿ ಕೇಳಿದಾಗ, ಅಲ್ಲಿನ ಪೂಜಾರಿಯೊಬ್ಬರು "ನಿಮ್ಮ ನಾಯಕನಿಗೆ ಅತಿ ಶೀಘ್ರವೇ ರಾಜಯೋಗ ಒದಗಿ ಬರಲಿದೆ" ಎಂದು ಭವಿಷ್ಯ ನುಡಿದಿದ್ದರು. ಅಂದು ಶಬರಿಮಲೆಯ ಸನ್ನಿಧಿಯಲ್ಲಿ ಕೇಳಿಬಂದ ಆ ಭವಿಷ್ಯವಾಣಿಯು ಕೇವಲ ನಾಲ್ಕೇ ತಿಂಗಳಲ್ಲಿ ಅಕ್ಷರಶಃ ನಿಜವಾಗಿರುವುದು ಮತ್ತು ಜೀವರಾಜ್ ಶಾಸಕರಾಗಿ ಆಯ್ಕೆಯಾಗಿರುವುದು ಭಕ್ತರು ಹಾಗೂ ಕಾರ್ಯಕರ್ತರಲ್ಲಿ ಅತೀವ ಅಚ್ಚರಿ ಮೂಡಿಸಿದೆ.
ಒಟ್ಟಿನಲ್ಲಿ, ಸುದೀರ್ಘ ಕಾನೂನು ಹೋರಾಟ ಹಾಗೂ ದೈವಪ್ರಾರ್ಥನೆಯ ಫಲವಾಗಿ ಜೀವರಾಜ್ ಅವರು ಶೃಂಗೇರಿ ಕ್ಷೇತ್ರದ ಸಾರಥ್ಯವನ್ನು ಮರಳಿ ಪಡೆದಿದ್ದಾರೆ.
PublicNext
05/05/2026 10:14 pm
LOADING...