ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಯಲ್ಲಿ ಅಕ್ರಮ ನಡೆದಿದೆ ಎಂಬ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ ದಾಖಲಾಗಿದ್ದ ಎಫ್ಐಆರ್ಗೆ ಹೈಕೋರ್ಟ್ ಈಗ ತಡೆಯಾಜ್ಞೆ ನೀಡಿದೆ. ಚುನಾವಣಾ ಪ್ರಕ್ರಿಯೆಯಲ್ಲಿ ವಂಚನೆ ಮತ್ತು ಪಿತೂರಿ ನಡೆದಿದೆ ಎಂಬ ದೂರಿನ ಅನ್ವಯ ದಾಖಲಾಗಿದ್ದ ಈ ಕಾನೂನು ಕ್ರಮಕ್ಕೆ ನ್ಯಾಯಾಲಯ ತಡೆ ನೀಡಿರುವುದರಿಂದ, ಪ್ರಕರಣದ ಆರೋಪಿಗಳಾದ ಮಾಜಿ ಶಾಸಕ ಡಿ.ಎನ್. ಜೀವರಾಜ್ ಮತ್ತು ಅಂದಿನ ಅಧಿಕಾರಿಗಳಿಗೆ ತಾತ್ಕಾಲಿಕವಾಗಿ ದೊಡ್ಡ ಸಮಾಧಾನ ಸಿಕ್ಕಂತಾಗಿದೆ.
ಈ ವಿವಾದದ ಹಿನ್ನೆಲೆಯನ್ನು ಗಮನಿಸಿದರೆ, ಅಂಚೆ ಮತ ಎಣಿಕೆ ಟೇಬಲ್ನ ಏಜೆಂಟ್ ಆಗಿದ್ದ ಸುಧೀರ್ ಕುಮಾರ್ ಮುರೋಳ್ಳಿ ಅವರು ನೀಡಿದ ದೂರಿನ ಆಧಾರದ ಮೇಲೆ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮತಪತ್ರಗಳನ್ನು ಇರಿಸಲಾಗಿದ್ದ ಸ್ಟ್ರಾಂಗ್ ರೂಂ ಸೀಲ್ ಆಗಿರಲಿಲ್ಲ ಮತ್ತು ಟ್ರಂಕ್ಗಳ ಲಾಕ್ ಕಟ್ ಆಗಿತ್ತು ಎಂಬುದು ದೂರುದಾರರ ಪ್ರಮುಖ ಆರೋಪವಾಗಿತ್ತು. ಈ ಹಿನ್ನೆಲೆಯಲ್ಲಿ ಅಂದಿನ ಚುನಾವಣಾಧಿಕಾರಿ ವೇದಾಮೂರ್ತಿ, ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಮತ್ತು ಅಂದಿನ ಜಿಲ್ಲಾಧಿಕಾರಿ ರಮೇಶ್ ಕುಮಾರ್ ಅವರ ವಿರುದ್ಧ ವಂಚನೆ ಹಾಗೂ ಕ್ರಿಮಿನಲ್ ಪಿತೂರಿಯಂತಹ ಗಂಭೀರ ಕಲಂ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿತ್ತು.
ಚುನಾವಣಾ ಫಲಿತಾಂಶದ ನಂತರ ಜಿಲ್ಲೆಯ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದ ಈ ಪ್ರಕರಣವು ಈಗ ನ್ಯಾಯಾಲಯದ ಅಂಗಳದಲ್ಲಿದೆ. ಸದ್ಯ ಹೈಕೋರ್ಟ್ ಎಫ್ಐಆರ್ಗೆ ತಡೆ ನೀಡಿರುವುದರಿಂದ ಮುಂದಿನ ಕಾನೂನು ಹೋರಾಟ ಕುತೂಹಲ ಕೆರಳಿಸಿದೆ.
PublicNext
05/05/2026 01:44 pm
LOADING...