ಮಂಗಳೂರು:ನಗರದ ಕುಂಟಿಕಾನ ಬಳಿಯ ಲೋಹಿತ್ ನಗರದಲ್ಲಿ ದರೆ ಕುಸಿದ ಪರಿಣಾಮ ಮಣ್ಣಿನಡಿ ಸಿಲುಕಿ ಗಂಭೀರ ಗಾಯಗೊಂಡಿದ್ದ ಗುತ್ತಿಗೆದಾರ ಮೃತಪಟ್ಟ ಘಟನೆ ಗುರುವಾರ ನಡೆದಿರುವುದಾಗಿ ವರದಿಯಾಗಿದೆ.
ಉರ್ವ ಅಶೋಕನಗರ ನಿವಾಸಿ ಆ್ಯಂಟನಿ ಮಸ್ಕರೇನ್ವಸ್ (65) ಮೃತಪಟ್ಟವರು.
ಲೋಹಿತ್ ನಗರದ ಗುಡ್ಡ ಜರಿತ ಉಂಟಾದ ಮನೆಯ ಮೇಲ್ಬಾಗದಲ್ಲಿ ಇನ್ನೊಂದು ಮನೆಯಿದೆ. ಕಳೆದ ವರ್ಷ ಮಳೆಗಾಲದಲ್ಲಿ ಒಂದು ಬಾರಿ ಕುಸಿದಿತ್ತು. ಈ ಬಾರಿಯೂ ಕುಸಿಯುವ ಆತಂಕವಿದ್ದ ಕಾರಣ ತಡೆಗೋಡೆ ನಿರ್ಮಾಣ ಮಾಡಲು ಮುಂದಾಗಿದ್ದರು.
ಅದರಂತೆ ತಡೆಗೋಡೆ ನಿರ್ಮಾಣಕ್ಕೆ ಆ್ಯಂಟನಿ ನಾಲ್ವರು ಕಾರ್ಮಿಕರೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ, ಅಳತೆ ಮಾಡುತ್ತಿದ್ದಾಗ ಏಕಾಏಕಿ ದರೆ ಜರಿದಿದೆ. ಪರಿಣಾಮ ಆ್ಯಂಟನಿ ಮಣ್ಣಿನಡಿ ಸಿಲುಕಿಕೊಂಡಿದ್ದಾರೆ ಎನ್ನಲಾಗಿದೆ. ಜತೆಗಿದ್ದ ಕೆಲಸಗಾರರು ಸ್ಥಳದಿಂದ ಓಡಿ ಅಪಾಯದಿಂದ ಪಾರಾಗಿದ್ದಾರೆ.
ಸ್ಥಳೀಯರು ತಕ್ಷಣ ಕದ್ರಿಯ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ. ಮಣ್ಣು ಮೈ ಮೇಲೆ ಬಿದ್ದ ಪರಿಣಾಮ ಗಂಭೀರ ಗಾಯಗೊಂಡಿದ್ದ ಆ್ಯಂಟನಿ ಅವರನ್ನು, ಕಾರ್ಯಾಚರಣೆ ನಡೆಸಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಆಗಲೇ ಅವರು ಮೃತಪಟ್ಟಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Kshetra Samachara
22/05/2026 08:57 pm
LOADING...