ಚಳ್ಳಕೆರೆ: ಜೂನ್ 1 ರಂದು 2026_27 ನೇ ಸಾಲಿನ ಶೈಕ್ಷಣಿಕ ಶಾಲಾ ಆರಂಭೋತ್ಸವಕ್ಕೆ ಸಕಲ ಸಿದ್ದತೆ ಮಾಡಿಕೊಳ್ಳಬೇಕು ಎಂದು ಬಿಇಒ ಕೆ.ಎಸ್. ಸುರೇಶ್ ಹೇಳಿದರು.
ಚಳ್ಳಕೆರೆ ನಗರದ ರೋಟರಿ ಬಾಲ ಭವನದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಮುಖ್ಯ ಶಿಕ್ಷಕರ ಸಭೆಯನ್ನು ಉದ್ಟಾಟಿಸಿ ಮಾತನಾಡಿದರು.
ಶಾಲೆಗಳಿಗೆ ಹಸಿರು ತೋರಣ ಕಟ್ಟಿ, ಸಿಹಿ ಊಟ ತಯಾರಿಸಿ ಮಕ್ಕಳನ್ನು ಸಂಭ್ರಮದಿಂದ ಶಾಲೆಗೆ ಬರಮಾಡಿಕೊಳ್ಳಬೇಕು. ಸರ್ಕಾರಿ ಶಾಲೆಗಳ ಸಬಲೀಕರಣಕ್ಕಾಗಿ ಮಕ್ಕಳ ದಾಖಲಾತಿಗೆ ಮೊದಕ ಆದ್ಯತೆ ನೀಡಬೇಕು. ದಾಖಲಾದ ಮಗು ವರ್ಷವೀಡಿ ಶಾಲೆಯ ಕಲಿಕೆಯಲ್ಲಿ ತೊಡಗುವಂತೆ ನೋಡಿಕೊಳ್ಳಬೇಕು. ಮಕ್ಕಳ ಕೇಂದ್ರಿಕೃತವಾಗಿ ಶಾಲಾ ವಾತಾವರಣ ನಿರ್ಮಾಣ ಮಾಡಬೇಕು. ಪ್ರಾದೇಶಿಕವಾಗಿ ಇಲ್ಲಿ ಕೃಷಿಕ ಹಿನ್ನೆಲೆ ಮತ್ತು ಹಬ್ಬ,ಜಾತ್ರೆಗಳ ಸಾಂಸ್ಕೃತಿಕ ಪದ್ದತಿಗಳ ಪರಿಸರದಿಂದ ಬರುವ ಮಕ್ಕಳನ್ನು ಶಾಲೆಯಲ್ಲಿ ಉಳಿಸಿಕೊಳ್ಳುವುದು ಸವಾಲಿನ ಕೆಲಸ. ಆದರೂ, ಸರ್ಕಾರಿ ಶಾಲೆಗಳ ಬೆಳವಣಿಗೆ ಮಕ್ಕಳ ದಾಖಲಾತಿಯಿಂದ ಮಾತ್ರ ಉಳಿಯಲು ಸಾಧ್ಯ. ಇಲ್ಲಿ ಉಚಿತವಾಗಿ ಸಿಗುವ ಗುಣಮಟ್ಟದ ಶಿಕ್ಷಣ, ಸಮವಸ್ತ್ರ, ಪಠ್ಯಪುಸ್ತಕ, ಶೂ ಮತ್ತು ಸಾಕ್ಸ್, ಬಿಸಿಯೂಟ ಮತ್ತು ವಿದ್ಯಾರ್ಥಿ ವೇತನ ಅರ್ಹ ಮಕ್ಕಳಿಗೆ ಸದುಪಯೋಗ ಆಗಬೇಕು.ಮೌಲ್ಯಾಧಾರಿತ ಮತ್ತು ನೈತಿಕ ಶಿಕ್ಷಣದಿಂದ ಮಕ್ಕಳ ಬದುಕು ರೂಪಿಸುವ ಹೊಣೆಗಾರಿಕೆ ಶಿಕ್ಷಕರ ಮೇಲಿದೆ. ನಮ್ಮಲ್ಲಿ ದ್ವಿಭಾಷಾ ನೀತಿ ಯೋಜನೆ ಜಾರಿ ಇದೆ. ಇದರ ಹಿನ್ನೆಲೆಯಲ್ಲಿ ಈಗಾಗಲೇ 51 ಶಾಲೆಗಳಲ್ಲಿ ಎಲ್ ಕೆಜಿ( ಇಸಿಸಿ) ತರಗತಿಗಳನ್ನು ಪ್ರಾರಂಭಿಸಲಾಗಿದೆ.ಅದೇರೀತಿ ನೂತನವಾಗಿ ಮೂರು ಕೆಪಿಎಸ್ ಶಾಲೆಗಳ ಆರಂಭಕ್ಕೂ ಅವಕಾಶ ಆಗಿದೆ. ಪ್ರಸ್ತುತ ಅಗತ್ಯ ಇರುವ ಶಿಕ್ಷಕರ ಮಾಹಿತಿ ಸೇರಿ ಶಿಥಿಲವಾಗಿರುವ ಶಾಲೆಗಳ ನವೀಕರಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ತಿಳಿಸಿದರು.
ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಜಿ.ಟಿ. ಮಂಜುನಾಥ ಸ್ವಾಮಿ, ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಮಂಜು ಬಾಬು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಟಿ. ವೀರೇಶ್ ಮಾತನಾಡಿದರು.
.
Kshetra Samachara
28/05/2026 03:12 pm