ಕಾನ್ಪುರ: ಸರ್ಕಾರಿ ವ್ಯವಸ್ಥೆ ಹಾಗೂ ಅಧಿಕಾರಿಗಳ ಬೇಜವಾಬ್ದಾರಿತನ ಒಬ್ಬ ಸಾಮಾನ್ಯ ಮನುಷ್ಯನನ್ನು ಎಷ್ಟು ಮಟ್ಟಿಗೆ ಹತಾಶೆಗೆ ತಳ್ಳಬಹುದು ಎಂಬುದಕ್ಕೆ ಉತ್ತರಪ್ರದೇಶದ ಕಾನ್ಪುರ ದೇಹತ್ನಲ್ಲಿ ನಡೆದಿರುವ ಈ ಘಟನೆ ಸಾಕ್ಷಿಯಾಗಿದೆ. ನಾಲ್ಕು ವರ್ಷಗಳ ಹಿಂದೆ ಸರ್ಕಾರಿ ಕಾರ್ಯಕ್ರಮವೊಂದಕ್ಕೆ 500 ಊಟದ ಪ್ಯಾಕೆಟ್ಗಳನ್ನು (Lunch Packets) ಸರಬರಾಜು ಮಾಡಿದ್ದ ಸಣ್ಣ ವ್ಯಾಪಾರಿಯೊಬ್ಬರಿಗೆ, ಇಷ್ಟು ವರ್ಷಗಳಾದರೂ ಆಡಳಿತ ಮಂಡಳಿ ನಯಾಪೈಸೆ ಹಣ ಬಿಡುಗಡೆ ಮಾಡಿಲ್ಲ. ಇದರಿಂದ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ವ್ಯಾಪಾರಿ, ಕಚೇರಿಯಲ್ಲೇ ಕಣ್ಣೀರಿಟ್ಟ ಆಘಾತಕಾರಿ ಘಟನೆ ನಡೆದಿದೆ.
ಬಾಕಿ ಹಣಕ್ಕಾಗಿ ವರ್ಷಗಟ್ಟಲೆಯಿಂದ ಕಚೇರಿಗಳಿಗೆ ಅಲೆದು ಬೇಸತ್ತ ಗೌರವ್ ತ್ರಿಪಾಠಿ ಎಂಬುವವರೇ ಈ ದುರ್ದೈವಿ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಗೌರವ್ ತ್ರಿಪಾಠಿ ಅವರು ಸರ್ಕಾರಿ ಕಚೇರಿಯೊಳಗೆ ಪೊಲೀಸರ ಮುಂದೆಯೇ ತೀವ್ರವಾಗಿ ಕಣ್ಣೀರು ಹಾಕುತ್ತಾ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಬಿಜೆಪಿ ಸರ್ಕಾರದ ಅಡಿಯಲ್ಲಿ ನಡೆದಿದ್ದ ಕೆಲಸವೊಂದಕ್ಕೆ ತಾವು ಊಟ ಸರಬರಾಜು ಮಾಡಿದ್ದಾಗಿ ತಿಳಿಸಿರುವ ಅವರು, "ಅಧಿಕಾರಿಗಳು ನೀಡಬೇಕಾಗಿರುವ ಅಸಲಿ ಹಣಕ್ಕಿಂತ, ಕೇವಲ ಬಾಕಿ ಹಣವನ್ನು ವಸೂಲಿ ಮಾಡಲು ಕಚೇರಿಗಳಿಗೆ ಅಲೆದಾಡಿ ಬರೋಬ್ಬರಿ 1 ಲಕ್ಷ ರೂಪಾಯಿಗೂ ಹೆಚ್ಚು ಹಣವನ್ನು ಪೆಟ್ರೋಲ್ಗೇ ಖರ್ಚು ಮಾಡಿದ್ದೇನೆ" ಎಂದು ಕಣ್ಣೀರು ಹಾಕಿದ್ದಾರೆ.
ಹಣ ನೀಡದೆ ಸತಾಯಿಸುತ್ತಿರುವ ನಿರ್ದಿಷ್ಟ ಅಧಿಕಾರಿಗಳ ಹೆಸರುಗಳನ್ನು ಬಹಿರಂಗಪಡಿಸಿರುವ ಗೌರವ್, ಹತಾಶೆಯ ತುತ್ತತುದಿಗೆ ತಲುಪಿ ಕಚೇರಿಯಲ್ಲೇ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ (Self-Immolation) ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ.
ವ್ಯಾಪಾರಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದಂತೆ ಕಚೇರಿಯಲ್ಲಿದ್ದ ಸಿಬ್ಬಂದಿ ಹಾಗೂ ತಕ್ಷಣ ಸ್ಥಳಕ್ಕೆ ಧಾವಿಸಿದ ಕಾನ್ಪುರ ದೇಹತ್ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಕಣ್ಣೀರು ಹಾಕುತ್ತಿದ್ದ ಗೌರವ್ ಅವರ ಜೊತೆ ಸುದೀರ್ಘವಾಗಿ ಮಾತನಾಡಿದ ಪೊಲೀಸರು ಅವರಿಗೆ ಧೈರ್ಯ ತುಂಬಿ ಕೌನ್ಸೆಲಿಂಗ್ ನಡೆಸಿದ್ದಾರೆ.
ಇದಾದ ಬೆನ್ನಲ್ಲೇ ಎಚ್ಚೆತ್ತುಕೊಂಡ ಕಾರ್ಮಿಕ ಇಲಾಖೆಯ ಕಮಿಷನರ್ (Labor Commissioner), ಮುಂಬರುವ ಎರಡು ವಾರಗಳ ಒಳಗಾಗಿ ಗೌರವ್ ಅವರಿಗೆ ಬರಬೇಕಾದ ಸಂಪೂರ್ಣ ಹಣವನ್ನು ಪಾವತಿ ಮಾಡಿಸಿಕೊಡುವುದಾಗಿ ಅಧಿಕೃತವಾಗಿ ಭರವಸೆ ನೀಡಿದ್ದಾರೆ. ಸದ್ಯಕ್ಕೆ ಸ್ಥಳದಲ್ಲಿ ಪರಿಸ್ಥಿತಿ ಶಾಂತವಾಗಿದ್ದು, ಪೊಲೀಸರು ನಿಗಾ ವಹಿಸಿದ್ದಾರೆ.
PublicNext
02/06/2026 07:03 pm