ಮಂಗಳೂರು:ಕೊಂಕಣ ರೈಲು ಮಾರ್ಗದಲ್ಲಿ ಅನಧಿಕೃತ ಮಾರಾಟ ಚಟುವ ಟಿಕೆಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಕೊಂಕಣ ರೈಲ್ವೇ ವಾಣಿಜ್ಯ ವಿಭಾಗ, ರೈಲ್ವೇ ರಕ್ಷಣ ಪಡೆ ಮೇ 31ರಿಂದ 15 ದಿನಗಳ ಕಾರ್ಯಾಚರಣೆ ನಡೆಸುತ್ತಿದೆ.
ಈ ಅವಧಿಯಲ್ಲಿ ರೈಲು ನಿಲ್ದಾಣಗಳು, ರೈಲುಗಳ ಒಳಭಾಗದಲ್ಲಿ ತೀವ್ರ ತಪಾಸಣೆ ನಡೆಸಲಾಗುತ್ತಿದ್ದು, ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿನ ಕ್ರಮ ಕೈಗೊಳ್ಳಲಾಗುತ್ತಿದೆ. ಮೇ 31ರಂದು ಮಡ್ಗಾಂವ್-ಮುಂಬಯಿ ಸಿಎಎಂಟಿ ಜನಶತಾಬಿ ಎಕ್ಸ್ಪ್ರೆಸ್ ರೈಲಿನಲ್ಲಿ ಹಾಳಾದ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದ ಅನಧಿಕೃತ ವ್ಯಕ್ತಿ ವಿರುದ್ದ ದೂರು ಬಂದ ತತ್ಕ್ಷಣವೇ ಕ್ರಮ ತೆಗೆದುಕೊಳ್ಳಲಾಗಿದೆ.
ಈ ರೈಲಿನಲ್ಲಿ ಆಹಾರ ಪೂರೈಕೆ ಸೇವೆಯನ್ನು ಐಆರ್ಸಿಟಿಸಿ ನಿರ್ವಹಿಸುತ್ತಿದ್ದು, ಪರಿಶೀಲನೆ ವೇಳೆ ವ್ಯಕ್ತಿ ಪರವಾನಿಗೆ ಅಥವಾ ಗುರುತಿನ ಚೀಟಿ ಇಲ್ಲದೆ ಪ್ರಯಾಣಿಕರಿಗೆ ಹಣ್ಣುಗಳನ್ನು ಮಾರಾಟ ಮಾಡುತ್ತಿರುವುದು ಪತ್ತೆಯಾಗಿದೆ. ರೈಲ್ವೇ ನಿಯಮಾ ನುಸಾರ ಆತನಿಗೆ ದಂಡ ವಿಧಿಸಲಾಗಿದ್ದು, ಬಳಿಕ ಹೆಚ್ಚಿನ ಕ್ರಮಕ್ಕಾಗಿ ರತ್ನಗಿರಿ ರೈಲ್ವೇ ರಕ್ಷಣ ಪಡೆಯ ವಶಕ್ಕೆ ನೀಡಲಾಗಿದೆ.
ಅಧಿಕಾರಿಗಳಿಗೆ ಮಾಹಿತಿ ನೀಡಿ
ವಿಶೇಷ ಕಾರ್ಯಾಚರಣೆ ಮೂಲಕ ಅನಧಿಕೃತ ಮಾರಾಟ, ಹೆಚ್ಚುವರಿ ದರ ವಸೂಲಿ, ಇತರ ಅಕ್ರಮ ಚಟುವಟಿಕೆಗಳನ್ನು ತಡೆಯುವ ಜತೆಗೆ ಪ್ರಯಾಣಿ ಕರಿಗೆ ಸುರಕ್ಷಿತ, ಸ್ವಚ್ಛ ಗುಣಮಟ್ಟದ ಸೇವೆ ಒದಗಿಸುವ ಗುರಿ ಕೊಂಕಣ ರೈಲ್ವೇ ಹೊಂದಿದೆ. ಅನಧಿಕೃತ ವ್ಯಾಪಾರ, ಅಕ್ರಮ ವಸೂಲಿ/ ಇತರ ಅಸಮರ್ಪಕ ಚಟುವಟಿಕೆಗಳು ಕಂಡುಬಂದಲ್ಲಿ ಪ್ರಯಾಣಿಕರು ತತ್ಕ್ಷಣ ರೈಲ್ವೇ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಕೊಂಕಣ ರೈಲ್ವೇ ಪ್ರಕಟನೆ ತಿಳಿಸಿದೆ..
Kshetra Samachara
03/06/2026 09:59 pm
LOADING...