ಬಾಗಲಕೋಟೆ: ರಜೆಗೆ ಊರಿಗೆ ಬಂದಿದ್ದ ಭಾರತೀಯ ಸೇನೆ ಯೋಧ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಕುಂಚನೂರು ಗ್ರಾಮದ ನಿವಾಸಿಯಾಗಿದ್ದ 30 ವರ್ಷದ ಮಹಾದೇವ ಡವಳಾಪುರ ಮೃತಪಟ್ಟಿದ್ದಾರೆ. ಮೃತ ಯೋಧ ಕಳೆದ 5 ವರ್ಷಗಳಿಂದ ಭಾರತೀಯ ಸೇನೆಯ ಗಡಿ ಭದ್ರತೆ ಪಡೆಯಲ್ಲಿ ಸೈನಿಕನಾಗಿದ್ದ. ಕಳೆದ ಒಂದು ವಾರದ ಹಿಂದೆ ರಜೆ ಮೇಲೆ ಊರಿಗೆ ಬಂದಿದ್ದರು.
ನಿನ್ನೆ ತಮ್ಮ ಮನೆ ದೇವರಾದ ಮಹಾರಾಷ್ಟ್ರದ ಗಡಿಯಲ್ಲಿರುವ ಅರಕೇರಿ ಅಮೋಘಸಿದ್ದ ದೇವಸ್ಥಾನಕ್ಕೆ ತೆರಳಿದ್ದ. ದೇವರ ದರ್ಶನ ಪಡೆದು ಬೈಕ್ ನಲ್ಲಿ ವಾಪಸ್ ಬರುವಾಗ ವಿಜಯಪುರ ನಗರದ ಹೊರವಲಯದಲ್ಲಿರುವ ಜಮಖಂಡಿ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. ರಸ್ತೆಯಲ್ಲಿ ಅಡ್ಡ ಬಂದ ಟಿಪ್ಪರ್ ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿ ಗ್ಯಾರೇಜ್ ಬಳಿ ನಿಂತ ಕಾರ್ ಗೆ ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೃತ ಯೋಧನ ಅಂತ್ಯಕ್ರಿಯೆ ಇಂದು ಸ್ವಗ್ರಾಮದಲ್ಲಿ ಸೇನಾ ಗೌರವದೊಂದಿಗೆ ನೆರವೇರಿದೆ. ಕಳೆದ ಎರಡು ವರ್ಷದ ಹಿಂದೆಯಷ್ಟೇ ಮದುವೆ ಆಗಿದ್ದ ಯೋಧನ ಪತ್ನಿ ಈಗ 6 ತಿಂಗಳ ಗರ್ಭಿಣಿಯಾಗಿದ್ದಾರೆ. ತಂದೆ ತಾಯಿಗೆ ಒಬ್ಬನೇ ಮಗನಾಗಿರುವ ಯೋಧ, ಅಜ್ಜ ಅಜ್ಜಿಯ ಕುಟುಂಬ ಹಾಗೂ ತನ್ನ ಕುಟುಂಬಕ್ಕೆ ತಾನೇ ಆಸರೆಯಾಗಿದ್ದ. ಮಗನನ್ನು ಕಳೆದುಕೊಂಡು ಕುಟುಂಬಸ್ಥರು ಶೋಕ ಸಾಗರದಲ್ಲಿ ಮುಳುಗಿದ್ದಾರೆ.
PublicNext
09/06/2026 10:25 am
LOADING...