ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಮೀನಕಳಿಯದಲ್ಲಿ ಕಡಲ್ಕೊರೆತ ತಡೆಗೆ ಸ್ಯಾಂಡ್‌ಬ್ಯಾಗ್ ಅಳವಡಿಕೆ

ಮಂಗಳೂರು: ನಗರದ ಬೈಕಂಪಾಡಿ ಬಳಿಯ ಮೀನಕಳಿಯ ಸಮುದ್ರ ತೀರದಲ್ಲಿ ಉಂಟಾಗುತ್ತಿರುವ ತೀವ್ರ ಕಡಲ್ಕೊರೆತವನ್ನು ತಡೆಗಟ್ಟಲು ಶಾಸಕ ಡಾ.ವೈ.ಭರತ್ ಶೆಟ್ಟಿಯವರ ಅನುದಾನದಲ್ಲಿ ಸ್ಯಾಂಡ್ ಬ್ಯಾಗ್‌ಗಳನ್ನು ಅಳವಡಿಸುವ ಕಾರ್ಯ ಕೈಗೊಳ್ಳಲಾಗಿದೆ.

ಈ ಭಾಗದಲ್ಲಿ ಸುಮಾರು 300ರಷ್ಟು ಮೀನುಗಾರರ ಮನೆಗಳಿದ್ದು, 7000ದಷ್ಟು ಜನರು ವಾಸಿಸುತ್ತಿದ್ದಾರೆ. ಮೀನುಗಾರಿಕೆಗೆ ತೆರಳಲು ಹತ್ತಿರವಾಗುವಂತೆ ಸಮುದ್ರ ತೀರದಲ್ಲಿಯೇ ಬದುಕು ಕಟ್ಟಿಕೊಳ್ಳುವುದು ಇಲ್ಲಿನವರಿಗೆ ಅನಿವಾರ್ಯ.‌ ಆದರೆ ಇತ್ತೀಚಿನ ವರ್ಷಗಳಲ್ಲಿ ಮಳೆಗಾಲದ ಸಂದರ್ಭ ಮೀನಕಳಿಯ ಸಮುದ್ರ ತೀರದಲ್ಲಿ ತೀವ್ರ ಕಡಲ್ಕೊರೆತ ಉಂಟಾಗುತ್ತಿದೆ. ಬೃಹತ್ ಗಾತ್ರದ ಅಲೆಗಳು ಕಡಲ ತೀರಕ್ಕೆ ಅಪ್ಪಳಿಸುತ್ತಾ ಭೂಭಾಗವನ್ನು ಆಪೋಷಣ ಪಡೆದುಕೊಳ್ಳುತ್ತಿದೆ.

ಪರಿಣಾಮ ಸಮುದ್ರಕ್ಕೆ ಹತ್ತಿರವಿರುವ ಮೀನುಗಾರರು ಮಳೆಗಾಲದ ಸಂದರ್ಭ ಜೀವ ಕೈಯ್ಯಲ್ಲಿಟ್ಟುಕೊಂಡು ಬದುಕುವ ಪರಿಸ್ಥಿತಿಯಿದೆ. ಆದ್ದರಿಂದ ಇಲ್ಲಿನ ಮನೆಗಳು ಹಾಗೂ ರಸ್ತೆಗಳನ್ನು ರಕ್ಷಿಸಲು ಸ್ಯಾಂಡ್ ಬ್ಯಾಗ್ ಮತ್ತು ಕಲ್ಲುಗಳನ್ನು ಅಳವಡಿಸಿ ತಾತ್ಕಾಲಿಕ ತಡೆಗೋಡೆ ನಿರ್ಮಿಸಲಾಗುತ್ತಿದೆ. ವರ್ಷಂಪ್ರತಿ ಮಳೆಗಾಲದ ಸಂದರ್ಭ ಜೆಸಿಬಿ ಬಳಸಿ ಈ ಕಾರ್ಯ ಮಾಡಲಾಗುತ್ತಿದೆ. ಇಲ್ಲಿನ ಸಾಂಪ್ರದಾಯಿಕ ಮೀನುಗಾರರು ಕಲ್ಲುಗಳ ದೊಡ್ಡ ಗೋಡೆ ನಿರ್ಮಿಸಲು ಒಪ್ಪುವುದಿಲ್ಲ. ಕಲ್ಲಿನ ಗೋಡೆ ಕಟ್ಟಿದರೆ ದೋಣಿಗಳನ್ನು ದಂಡೆಗೆ ತರಲು ಮತ್ತು ಲಂಗರು ಹಾಕಲು ಕಷ್ಟವಾಗುತ್ತದೆ ಎಂಬುದು ಅವರ ಅಭಿಪ್ರಾಯ.

ಆದ್ದರಿಂದ ತಾತ್ಕಾಲಿಕ ರಕ್ಷಣೆಯ ಬದಲು ಶಾಶ್ವತ ಪರಿಹಾರ ಬೇಕೆನ್ನುವುದು ಇಲ್ಲಿನ ಮೀನುಗಾರರ ಬೇಡಿಕೆ. ಅದಕ್ಕಾಗಿ ಸ್ಯಾಂಡ್ ಬ್ಯಾಗ್‌ಗಳ ಬದಲಿಗೆ ಮರವಂತೆಯ ಟಿ ಮಾದರಿಯ ಬ್ರೇಕ್-ವಾಟರ್ ವ್ಯವಸ್ಥೆಯನ್ನು ಕಲ್ಪಿಸಿಕೊಡುವಂತೆ ಸರ್ಕಾರಕ್ಕೆ ಸತತವಾಗಿ ಒತ್ತಾಯಿಸುತ್ತಿದ್ದಾರೆ. ಸರಕಾರ ಮೀನುಗಾರರ ಈ ಬೇಡಿಕೆಗೆ ತಕ್ಷಣ ಸ್ಪಂದಿಸಿ ಇನ್ನಷ್ಟು ಭೂಭಾಗ ಸಮುದ್ರದ ಒಡಲು ಸೇರುವುದನ್ನು ತಪ್ಪಿಸಬೇಕಾಗಿದೆ.

Edited By : Shivu K
PublicNext

PublicNext

10/06/2026 05:43 pm

Cinque Terre

10.25 K

Cinque Terre

0

ಸಂಬಂಧಿತ ಸುದ್ದಿ