ದೆಹಲಿ: ಬಿಜೆಪಿ ನಾಯಕ ಹಾಗೂ ಮಾಜಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಅಯೋಧ್ಯೆ ರಾಮಮಂದಿರ ದೇಣಿಗೆ ದುರುಪಯೋಗ ಕುರಿತು ಸ್ಫೋಟಕ ಹೇಳಿಕೆ ನೀಡಿದ್ದಾರೆ. "ಅಯೋಧ್ಯೆ ರಾಮಮಂದಿರದ ದೇಣಿಗೆ ದುರುಪಯೋಗದ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ಇದೆ, ಆದರೆ ಪ್ರಭಾವಶಾಲಿ ವ್ಯಕ್ತಿಗಳಿಂದ ತೊಂದರೆಯಾಗುವ ಭೀತಿಯಿಂದ ಸತ್ಯ ಬಹಿರಂಗಪಡಿಸಲು ಸದ್ಯಕ್ಕೆ ಸಾಧ್ಯವಿಲ್ಲ" ಎಂದು ಸಿಂಗ್ ಹೇಳಿದ್ದಾರೆ.
ದೆಹಲಿಯಲ್ಲಿ ಹತ್ತು ದಿನಗಳ ವಾಸ್ತವ್ಯ ಮುಗಿಸಿ ತಮ್ಮ ವಿಷ್ಣೋಹರ್ಪುರ ನಿವಾಸಕ್ಕೆ ಹಿಂದಿರುಗಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಂಗ್, "ನಾನು ತುಂಬಾ ದುರ್ಬಲ ವ್ಯಕ್ತಿ. ಅವರು (ಪ್ರಭಾವಶಾಲಿ ವ್ಯಕ್ತಿಗಳು) ಬಹಳ ಪ್ರಭಾವಶಾಲಿ ಜನರು. ನಾನು ಸತ್ಯವನ್ನು ಮಾತನಾಡಿದರೆ ತೊಂದರೆಗೆ ಸಿಲುಕುತ್ತೇನೆ. ಸದ್ಯಕ್ಕೆ ಸತ್ಯವನ್ನು ಮಾತನಾಡುವ ಧೈರ್ಯ ನನಗಿಲ್ಲ. ಸಮಯ ಬಂದಾಗ ಖಂಡಿತ ಮಾತನಾಡುತ್ತೇನೆ" ಎಂದು ಸ್ಪಷ್ಟಪಡಿಸಿದರು. ಆದಾಗ್ಯೂ, "ಅವರು" ಎಂದು ಯಾರನ್ನು ಉದ್ದೇಶಿಸಿ ಹೇಳಿದ್ದಾರೆ ಎಂಬುದನ್ನು ಸಿಂಗ್ ಬಹಿರಂಗಪಡಿಸಲಿಲ್ಲ. ಅಯೋಧ್ಯೆ ರಾಮಮಂದಿರಕ್ಕೆ ಸಂಗ್ರಹವಾದ ದೇಣಿಗೆ ಹಣ ದುರುಪಯೋಗವಾಗಿದೆ ಎಂಬ ಆರೋಪಗಳು ಕೇಳಿಬರುತ್ತಿರುವ ಬೆನ್ನಲ್ಲೇ ಸಿಂಗ್ ಅವರ ಈ ಹೇಳಿಕೆಗಳು ಮಹತ್ವ ಪಡೆದಿವೆ.
ಇದೇ ಸಂದರ್ಭದಲ್ಲಿ, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಬಗ್ಗೆಯೂ ಸಿಂಗ್ ಪ್ರತಿಕ್ರಿಯಿಸಿದರು. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಸಮರ್ಥಿಸಿಕೊಂಡ ಅವರು, "ಧರ್ಮೇಂದ್ರ ಅವರ ರಾಜೀನಾಮೆಯಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಬದಲಿಗೆ, ಈ ಪ್ರಕರಣದಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು" ಎಂದು ಒತ್ತಾಯಿಸಿದರು.
PublicNext
11/06/2026 06:12 pm
LOADING...