ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಇಂದು ಒಂದು ನಾಟಕೀಯ ಬೆಳವಣಿಗೆ ನಡೆದಿದ್ದು, ನೇಪಾಳ ಗಡಿಯಲ್ಲಿ ಬಂಧನಕ್ಕೊಳಗಾಗಿದ್ದ ತೃಣಮೂಲ ಕಾಂಗ್ರೆಸ್ (TMC) ಪಕ್ಷದ ಪ್ರಭಾವಿ ನಾಯಕ, ಅಭಿಷೇಕ್ ಬ್ಯಾನರ್ಜಿ ಅವರ ಆಪ್ತ ಜಹಾಂಗೀರ್ ಖಾನ್ ಅಲಿಯಾಸ್ 'ಪುಷ್ಪ'ನನ್ನು ಪೊಲೀಸರು ಫಾಲ್ಟಾದ ಬೀದಿಗಳಲ್ಲಿ ಸಾರ್ವಜನಿಕವಾಗಿ ಮೆರವಣಿಗೆ ನಡೆಸಿದ್ದಾರೆ.
ಜೂನ್ 8ರಂದು ರಾಜ್ಯದಿಂದ ಪರಾರಿಯಾಗಲು ಯತ್ನಿಸುತ್ತಿದ್ದ ಜಹಾಂಗೀರ್ ಖಾನ್ನನ್ನು ನೇಪಾಳ ಗಡಿಯ ಬಳಿ ಬಂಧಿಸಲಾಗಿತ್ತು. ಈತನ ವಿರುದ್ಧ ಸುಲಿಗೆ, ಕ್ರಿಮಿನಲ್ ಬೆದರಿಕೆ, ಐಪಿಎಸ್ ಅಧಿಕಾರಿಗೆ ಬೆದರಿಕೆ ಹಾಗೂ 2021ರ ಚುನಾವಣೋತ್ತರ ಹಿಂಸಾಚಾರದಲ್ಲಿ ಭಾಗಿಯಾಗಿರುವಂತಹ ಗಂಭೀರ ಆರೋಪಗಳಿವೆ. ಅಚ್ಚರಿಯೆಂದರೆ, ಬಂಧನಕ್ಕೆ ಕೆಲವೇ ದಿನಗಳ ಮುನ್ನ ಈತ ಫಾಲ್ಟಾ ವಿಧಾನಸಭಾ ಉಪಚುನಾವಣೆಯ ಉಮೇದುವಾರಿಕೆಯನ್ನು ಹಿಂಪಡೆದಿದ್ದನು.
ಪೊಲೀಸರು ಜಹಾಂಗೀರ್ ಖಾನ್ನನ್ನು ಬಂಧಿಸಿ ಸೊಂಟಕ್ಕೆ ಹಗ್ಗ ಕಟ್ಟಿ, ಶಾರ್ಟ್ಸ್ ಧರಿಸಿದ ಸ್ಥಿತಿಯಲ್ಲಿ ಬರಿಗಾಲಿನಲ್ಲಿ ಘಟನಾ ಸ್ಥಳದ ಮರುಸೃಷ್ಟಿಗಾಗಿ (Crime Scene Reconstruction) ನಡೆಸಿಕೊಂಡು ಹೋಗಿದ್ದಾರೆ. ಈ ರೀತಿ ಸಾರ್ವಜನಿಕವಾಗಿ ಪರೇಡ್ ಮಾಡುತ್ತಿರುವುದು ಇದು ಮೂರನೇ ಬಾರಿಯಾಗಿದ್ದು, ಈ ವಿವಾದಾತ್ಮಕ ಕ್ರಮದ ಕುರಿತು ಕೋಲ್ಕತ್ತಾ ಹೈಕೋರ್ಟ್ ಈಗ ಪೊಲೀಸರಿಂದ ವರದಿಯನ್ನು ಕೇಳಿದೆ.
ಈ ಘಟನೆಗೆ ಸಂಬಂಧಿಸಿದಂತೆ ಸಾರ್ವಜನಿಕ ವಲಯದಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕೆಲವರು ಇದನ್ನು ಅಪರಾಧದ ವಿರುದ್ಧ ಪೊಲೀಸರು ಕೈಗೊಂಡಿರುವ ಕಠಿಣ ಕ್ರಮ ಎಂದು ಶ್ಲಾಘಿಸುತ್ತಿದ್ದರೆ, ಇನ್ನು ಕೆಲವರು ಇದು ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಸಾರ್ವಜನಿಕ ಅವಮಾನ ಎಂದು ತೀವ್ರವಾಗಿ ಟೀಕಿಸುತ್ತಿದ್ದಾರೆ.
PublicNext
15/06/2026 05:31 pm
LOADING...