ಬ್ರಹ್ಮಾವರ: 150 ವರ್ಷಗಳ ಇತಿಹಾಸದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂಡಳಿ ಕೊಂಜಾಡಿ, ಅರಣ್ಯ ಇಲಾಖೆ ಹೆಬ್ರಿ ವಲಯ, ಗ್ರಾಮ ಪಂಚಾಯತಿ ಬೆಳ್ವೆ ಇವರ ಆಶ್ರಯದಲ್ಲಿ ಶ್ರಮದಾನ, ಪ್ರಕೃತಿ ಪೂಜೆ, ವನಮಹೋತ್ಸವ ಮತ್ತು ಸ್ವಚ್ಛತಾ ಕಾರ್ಯಕ್ರಮ ಭಾನುವಾರ ದೇವಸ್ಥಾನದ ವಠಾರದಲ್ಲಿ ಜರುಗಿತು.
ಶ್ರೀನಾಥ್ ಭಟ್ ಅವರು ಶ್ರೀದೇವಿಗೆ ಪ್ರಕೃತಿ ಪೂಜೆ ಮಾಡಿದರು. ಬಳಿಕ ದೇವಸ್ಥಾನದ ಬಳಿಯಿಂದ 3 ಕಿಮೀ ತನಕ ರಸ್ತೆ ಬದಿಯಲ್ಲಿ ಬಿದ್ದ ತ್ಯಾಜ್ಯ, ಪ್ಲಾಸ್ಟಿಕ್ಗಳನ್ನು ಭಜನಾ ಮಂಡಳಿಯ 75 ಕ್ಕೂ ಹೆಚ್ಚು ಸದಸ್ಯರು ಸ್ವಚ್ಛಗೊಳಿಸಿ ರಸ್ತೆಯ ಬದಿಯಲ್ಲಿ ಹಣ್ಣು ನೀಡುವ ನಾನಾ ಜಾತಿಯ ಸಸಿಗಳನ್ನು ನೆಟ್ಟು 12ನೇ ವರ್ಷದ ವನಮಹೋತ್ಸವ ಆಚರಿಸಿದರು.
ಉಪವಲಯ ಅರಣ್ಯಾಧಿಕಾರಿ ಹೇಮಾ ಅವರು ಗಿಡ ನೆಟ್ಟು ಬಳಿಕ ಮಾತನಾಡಿ, ಅರಣ್ಯ ಇಲಾಖೆ ಮಾಡಬೇಕಾದ ಕಾರ್ಯವನ್ನು ಇಲ್ಲಿನ ಭಜನಾ ಸಂಘ, ಚಿಕ್ಕ ಮಕ್ಕಳಿಗೆ ಪರಿಸರ ಮತ್ತು ಪ್ರಕೃತಿ ಬಗ್ಗೆ ತಿಳಿಸುವ ಕಾರ್ಯ ಮಾದರಿಯಾಗಿದೆ ಎಂದರು. ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸತೀಶ್, ಗಣ್ಯರಾದ ಸಂತೋಷ್ ಕುಮಾರ್ ಶೆಟ್ಟಿ, ಆನಂದ ಶೆಟ್ಟಿ ನರ್ಗಡಿಗೆ, ಚಂದ್ರ ಶೇಖರ ಶೆಟ್ಟಿ, ಪ್ರತಾಪ್, ಕೃಷ್ಣ ಮೂರ್ತಿ ಆಚಾರ್ಯ, ಪ್ರತಾಪ್ ಕುಲಾಲ್, ಸತೀಶ್ ಶೆಟ್ಟಿ, ಸಂಜೀವ ಆರ್ಡಿ ಉಪಸ್ಥಿತರಿದ್ದರು.
PublicNext
15/06/2026 06:54 pm
LOADING...