ಮುಲ್ಕಿ: ಅತಿಕಾರಿ ಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಂಜಿನಡ್ಕ- ಮೈಲೊಟ್ಟು ಜಿಲ್ಲಾ ಪಂಚಾಯತ್ ರಸ್ತೆಯ ಅರ್ಧಭಾಗ ಕಳೆದ ಹಲವಾರು ವರ್ಷಗಳಿಂದ ಕೆಟ್ಟು ಹೋಗಿದ್ದು ಹೊಂಡಮಯ ರಸ್ತೆಯಿಂದ ಸಂಚಾರ ದುಸ್ತರವಾಗಿ ಪರಿಣಮಿಸಿದೆ.
ಪಂಜಿನಡ್ಕ ಜಂಕ್ಷನ್ ಬಳಿಯಿಂದ ಮೈಲೊಟ್ಟು ಕಡೆಗೆ ಹೋಗುವ ಕೆಟ್ಟು ಹೋದ ರಸ್ತೆಯ ಬೃಹದಾಕಾರದ ಹೊಂಡಕ್ಕೆ ಪಂಚಾಯತ್ ವತಿಯಿಂದ ಭಾರೀ ಗಾತ್ರದ ಜಲ್ಲಿಕಲ್ಲುಗಳನ್ನು ಹಾಕಲಾಗಿದ್ದು ಪ್ರಯಾಣ ಮತ್ತಷ್ಟು ತೊಂದರೆಯಾಗಿದೆ ಕಳೆದ ದಿನಗಳ ಹಿಂದೆ ಸುರಿದ ಭಾರೀ ಮಳೆಗೆ ರಸ್ತೆ ಹೊಂಡಕ್ಕೆ ಹಾಕಿರುವ ಜಲ್ಲಿಕಲ್ಲು ಕಿತ್ತು ಹೋಗಿದ್ದು ವಾಹನ ಸಂಚಾರ ಇನ್ನಷ್ಟು ತ್ರಾಸದಾಯಕವಾಗಿ ಪರಿಣಮಿಸಿದೆ.
ಈ ನಡುವೆ ರಸ್ತೆ ಬದಿಯಲ್ಲಿ ಕಿತ್ತು ಹೋಗಿರುವ ಡಾಮರು ಹಾಗೂ ಮಣ್ಣಿನ ನೆಲದ ನಡುವೆ ಹಾಕಿರುವ ಜಲ್ಲಿಕಲ್ಲು ಅಪಾಯಕಾರಿಯಾಗಿ ಪರಿಣಮಿಸಿದೆ ಎಂದು ಬಸ್ ಚಾಲಕ ರೋನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಡಾಮರೀಕರಣ ಕಾಣದೆ ಕಂಗಲಾಗಿರುವ ಪಂಜಿನಡ್ಕ- ಮೈಲೊಟ್ಟು ಜಿಲ್ಲಾ ಪಂಚಾಯತ್ ರಸ್ತೆ ಅರ್ಧ ಭಾಗ ಸ್ಥಳೀಯರ ಆಗ್ರಹ ಹಾಗೂ ಗ್ರಾಮ ಸಭೆಯಲ್ಲಿ ನಡೆದ ಪ್ರತಿಭಟನೆಯಿಂದ ಕಾಂಕ್ರಿಟೀಕರಣಗೊಂಡಿತ್ತು. ಆದರೆ ಉಳಿದ ಅರ್ಧ ಭಾಗ ಸರಿಯಾದ ದುರಸ್ತಿಗಾಗಿ ಬಕಪಕ್ಷಿಯಂತೆ ಕಾಯುತ್ತಿದೆ. ಈ ರಸ್ತೆಯ ಸ್ವಲ್ಪ ಭಾಗ ಮೈಲೊಟ್ಟು ಕೊಂಕಣ ರೈಲ್ವೇ ಗೇಟ್ ಬಳಿ ಬರುತ್ತಿದ್ದು ರೈಲ್ವೇ ಅಧಿಕಾರಿಗಳ ನಿರ್ಲಕ್ಷದಿಂದ ಡಾಮರೀಕರಣ ಹಾಗೂ ದುರಸ್ತಿ ಕನಸಿನ ಕೂಸಾಗಿದೆ.
PublicNext
15/06/2026 07:20 pm
LOADING...