ಬೆಳಗಾವಿ: ಊಟ ಮಾಡಲು ಹೋದರೆ ತಟ್ಟೆಯಲ್ಲಿ ಹುಳ ಬರ್ತಾವ ರೀ ಸರ್. ಜಳಕಕ್ಕೆ ಹೋದರೆ ಅಂತು ನೀರೇ ಬರಲ್ಲ. ಕುಡಿಯಲು ಸ್ವಚ್ಛ ನೀರು ಇಲ್ಲವೆ ಇಲ್ಲ. ನಲ್ಲಿ ನೀರು ಸೀದಾ ಕುಡಿದು ಆಸ್ಪತ್ರೆಗೆ ಹೋಗುವ ಪರಿಸ್ಥಿತಿ ಎದುರಾಗಿದೆ ಎಂದು ಹಾಸ್ಟೆಲ್ ವಿದ್ಯಾರ್ಥಿಗಳು ದಿಢೀರ್ ಪ್ರತಿಭಟನೆ ನಡೆಸಿದರು.
ಬೆಳಗಾವಿಯ ಸಂಗಮೇಶ್ವರ ನಗರದ ಬಾಲಕರ ಮೆಟ್ರಿಕ್ ನಂತರದ ವಸತಿ ನಿಲಯದಲ್ಲಿ ಕಳೆದ ಹಲವು ದಿನಗಳಿಂದ ನೀರಿನ ಅಭಾವ ಎದುರಾಗಿದೆ. ಶುದ್ಧ ಕುಡಿಯಲು ನೀರು ಸಹ ಸಿಗುತ್ತಿಲ್ಲ. ಶೌಚಕ್ಕೆ ಹೋಗಲು ಸಹ ಆಗುತ್ತಿಲ್ಲ. ಊಟದಲ್ಲಿ ಪದೇ ಪದೇ ಹುಳುಗಳು ಬರುತ್ತಿದೆ. ಮುಂದೆ ನಿಂತ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಬೇಕಿದ್ದ ವಾರ್ಡನ್ ವಾರಕ್ಕೋಮ್ಮೆ ಬಂದು ಹೋದರೆ ಮುಗಿಯಿತು. ಹಾಸ್ಟೆಲ್ ಕಡೆ ಕಣ್ಣೆತ್ತಿಯೂ ನೋಡಲ್ಲ ಎಂದು ವಿದ್ಯಾರ್ಥಿಗಳು ಆಕ್ರೋಶ ಹೊರ ಹಾಕಿದರು.
ಇಂದು ಹಾಸ್ಟೆಲ್ ಗೆ ಅಪರೂಪಕ್ಕೆ ವಾರ್ಡನ್ ಆಗಮಿಸಿದ್ದರು, ಈ ವೇಳೆ ವಿದ್ಯಾರ್ಥಿಗಳ ತಟ್ಟೆಯಲ್ಲಿ ಹುಳಗಳು ಕಾಣಿಕೊಂಡಿದೆ. ಇದರಿಂದ ರೊಚ್ಚಿಗೆದ್ದ ವಿದ್ಯಾರ್ಥಿಗಳು ಊಟ ಬಿಟ್ಟು ಅಡುಗೆ ಪಾತ್ರೆ ಹೊರಗೆ ಇಟ್ಟು ಪ್ರತಿಭಟಿಸಿದರು. ಸಮಾಜ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ಹಾಗೂ ಜಂಟಿ ನಿರ್ದೇಶಕರು ಸ್ಥಳಕ್ಕೆ ಬರಬೇಕೆಂದು ಪಟ್ಟು ಹಿಡಿದರು.
ಅಷ್ಟೊತ್ತಿಗೆ ಎಪಿಎಂಸಿ ಪೊಲೀಸ್ ಠಾಣೆಯ ಸಿಪಿಐ, ಪಿಎಸ್ಐ ಹಾಸ್ಟೆಲ್ ಗೆ ಆಗಮಿಸಿ ವಿದ್ಯಾರ್ಥಿಗಳನ್ನು ಸಮಾಧಾನ ಪಡಿಸಿ, ಪ್ರತಿಭಟನೆ ವಾಪಸ್ ಪಡೆಯುವಂತೆ ಮನ ಓಲಿಸಿದರು. ಮುಂದೆ ಈ ರೀತಿ ಆಗದಂತೆ ಮೇಲಧಿಕಾರಿಗಳ ಜೊತೆ ನಿಲಯದಲ್ಲಿ ಸಭೆ ಮಾಡಿ ಸರಿಪಡಿಸೋಣ ಎಂದು ಹೇಳಿದರು. ಮತ್ತೊಂದೆಡೆ ಫುಡ್ ಪಾಯಿಸನ್ ಆಗಿ ವಿದ್ಯಾರ್ಥಿಗಳ ಆರೋಗ್ಯದಲ್ಲಿ ಸಮಸ್ಯೆ ಆಗಬಾರದು ಎಂದು ಆ್ಯಂಬುಲೆನ್ಸ್ ಕರೆಸಲಾಗಿತ್ತು.
ಒಟ್ಟಿನಲ್ಲಿ ಪದೇ ಪದೇ ಹಾಸ್ಟೆಲ್ ನಲ್ಲಿ ಸಮಸ್ಯೆಗಳು ಉಂಟಾಗುತ್ತಿದ್ದು, ವಾರ್ಡನ್ ನಿರ್ಲಕ್ಷ್ಯವೇ ಇದಕ್ಕೆ ಮುಖ್ಯ ಕಾರಣ ಎಂದು ಹೇಳಲಾಗುತ್ತಿದೆ. ಇಲಾಖೆ ಅವರ ಮೇಲೆ ಏನು ಕ್ರಮ ಕೈಗೊಳ್ಳುತ್ತಾರಾ ಎಂದು ಕಾದು ನೋಡಬೇಕು.
PublicNext
18/06/2026 10:03 am
LOADING...