ಬೆಳಗಾವಿ: ಮೊಬೈಲ್ ನೀಡುವಂತೆ ಕೇಳಿದಾಗ, ಏಕೆ ಎಂದು ಮರುಪ್ರಶ್ನೆ ಮಾಡಿದ ವ್ಯಕ್ತಿಯ ಮೇಲೆ ಚಾಕುವಿನಿಂದ ಇರಿದು ಕೊಲೆ ಮಾಡಿದ ಪ್ರಕರಣದಲ್ಲಿ ತಪ್ಪಿತಸ್ಥ ಮಹಿಳೆಗೆ 7 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಮೂಲದ, ಬೆಳಗಾವಿಯ ಬಿ.ಕೆ.ಕಂಗ್ರಾಳಿಯ ನಿವಾಸಿ ಜಯಶ್ರೀ ಪವನ ಪವಾರ ಶಿಕ್ಷೆಗೆ ಗುರಿಯಾದವರು. 2023ರ ಏ.30ರಂದು ರಾತ್ರಿ 10ರ ಸುಮಾರಿಗೆ ಮಾರ್ಕೆಟ್ ಪೊಲೀಸ್ ಠಾಣೆ ವ್ಯಾಪ್ತಿಯ ಡೋರ ಗಲ್ಲಿ ಕ್ರಾಸ್ ಬಳಿ, ನಾಗರಾಜ ಭೀಮಶಿ ರಾಗಿಪಾಟೀಲ ತನ್ನ ಸ್ನೇಹಿತನೊಂದಿಗೆ ಬೈಕ್ ಮೇಲೆ ತೆರಳುತ್ತಿದ್ದಾಗ ಅಡ್ಡ ಬಂದ ಜಯಶ್ರೀ, ಮದ್ಯದ ನಶೆಯಲ್ಲಿ ತನಗೆ ಮೊಬೈಲ್ ನೀಡುವಂತೆ ಕೇಳಿದ್ದಳು. ಅದಕ್ಕೆ ನಾಗರಾಜ ಏಕೆ ನೀಡಬೇಕು ಎಂದು ಪ್ರಶ್ನಿಸಿದಾಗ ಆಕೆ ಕೋಪಗೊಂಡು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಅದಲ್ಲದೇ, ತನ್ನ ಕೈಯಲ್ಲಿದ್ದ ಚಾಕುವಿನಿಂದ ನಾಗರಾಜನ ಎದೆಗೆ ಇರಿದು ಗಂಭೀರ ಗಾಯಗೊಳಿಸಿದ್ದಳು. ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ನಾಗರಾಜ ಮೃತಪಟ್ಟಿದ್ದನು.
ಈ ಸಂಬಂಧ ನಾಗರಾಜ ಸ್ನೇಹಿತ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ತನಿಖಾಧಿಕಾರಿ ಪಾಲ್ ಪ್ರಿಯಕುಮಾರ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾದೀಶರಾದ ಮಂಜುನಾಥ ನಾಯಕ ಅವರು ಜಯಶ್ರೀಯನ್ನು ಅಪರಾಧಿ ಎಂದು ಪರಿಗಣಿಸಿ, ಏಳು ವರ್ಷ ಕಾರಾಗೃಹ ಶಿಕ್ಷೆ ಹಾಗೂ 25 ಸಾವಿರ ರೂ.ದಂಡ ವಿಧಿಸಿದ್ದಾರೆ.
ಅಲ್ಲದೇ, ಮೃತ ನಾಗರಾಜ ಕುಟುಂಬ ಪರಿಹಾರ ಒದಗಿಸುವಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಶಿಫಾರಸು ಮಾಡಿದ್ದಾರೆ. ಸರಕಾರದ ಪರವಾಗಿ ಸಾರ್ವಜನಿಕ ಅಭಿಯೋಜಕ ನಾರಾಯಣ ಆರಿ ಅವರು ವಕಾಲತು ವಹಿಸಿದ್ದರು.
PublicNext
18/06/2026 12:00 pm
LOADING...