ಧಾರವಾಡ: ಜೂನ್ 26 ರಂದು ಮೊಹರಂ ಹಬ್ಬದ ಆಚರಣೆ ನಡೆಯಲಿದ್ದು, ಹಬ್ಬದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದ ಎಸ್ಜಿವಿ ಹೈಸ್ಕೂಲ್ ಸಭಾಭವನದಲ್ಲಿ ಗರಗ ಪೊಲೀಸ್ ಠಾಣೆ ವತಿಯಿಂದ ಸರ್ವಧರ್ಮಗಳ ಶಾಂತಿಪಾಲನಾ ಸಭೆ ಏರ್ಪಡಿಸಲಾಗಿತ್ತು.
ಮೊಹರಂ ಹಬ್ಬದ ಸಂದರ್ಭದಲ್ಲಿ ದೇವರು ಕಿಚ್ಚು ಹಾಯುವ ಕಾರ್ಯಕ್ರಮ ಇರುತ್ತದೆ. ಆ ಸಂದರ್ಭದಲ್ಲಿ ವಯಸ್ಸಾದವರು, ಮದ್ಯಪಾನ ಮಾಡಿದವರು ಬೆಂಕಿಯ ಸುತ್ತಮುತ್ತ ನಿಲ್ಲದಂತೆ ನೋಡಿಕೊಳ್ಳಬೇಕು. ನ್ಯಾಯಾಲಯದ ಆದೇಶದಂತೆ ರಾತ್ರಿ 10 ಗಂಟೆಯ ನಂತರ ಡಿಜೆ ಸೌಂಡ್ ಮಾಡುವಂತಿಲ್ಲ. ಅದರ ಬಗ್ಗೆಯೂ ಗ್ರಾಮದ ಹಿರಿಯರು ಗಮನವಿಡಬೇಕು. ಪಾಂಜಾಗಳನ್ನು ಪ್ರತಿಷ್ಠಾಪಿಸಿದ ಜಾಗದಲ್ಲಿ ಕಡ್ಡಾಯವಾಗಿ ಪೂಜಾರಿಗಳು ಇರಬೇಕು. ಪೊಲೀಸ್ ಇಲಾಖೆ ನೀಡಿದ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಗರಗ ಠಾಣೆ ಪಿಎಸ್ಐ ಪ್ರವೀಣ ಗಂಗೋಳ ಹೇಳಿದರು.
ಈ ಸಭೆಯಲ್ಲಿ ಮಾತನಾಡಿದ ಉಪ್ಪಿನ ಬೆಟಗೇರಿ ಗ್ರಾಮದ ಹಿರಿಯರಾದ ವೀರಣ್ಣ ಪರಾಂಡೆ, ಮಹಾವೀರ ಅಷ್ಟಗಿ, ಮಂಜುನಾಥ ಸಂಕಣ್ಣವರ, ಬಸೀರ್ ಅಹ್ಮದ್ ಮಾಳಗಿಮನಿ, ಕಲ್ಲಪ್ಪ ಪುಡಕಲಕಟ್ಟಿ ಅವರು, ಉಪ್ಪಿನ ಬೆಟಗೇರಿ ಗ್ರಾಮ ಭಾವೈಕ್ಯತೆಗೆ ಸಾಕ್ಷಿಯಾಗಿದೆ. ಈ ಗ್ರಾಮದಲ್ಲಿ ಮೊಹರಂ ಹಬ್ಬವನ್ನು ಹಿಂದೂ, ಮುಸ್ಲಿಂ ಸಮಾಜದವರು ಸೇರಿ ಆಚರಿಸುತ್ತ ಬಂದಿದ್ದೇವೆ. ಇಲ್ಲಿ ಯಾವುದೇ ತೊಂದರೆಯಾಗದಂತೆ ಹಬ್ಬವನ್ನು ಆಚರಿಸುತ್ತೇವೆ ಎಂದರು.
ಈ ಶಾಂತಿಪಾಲನಾ ಸಭೆಯಲ್ಲಿ ಉಪ್ಪಿನ ಬೆಟಗೇರಿ, ಯಾದವಾಡ, ಹನುಮನಹಾಳ, ಕಲ್ಲೆ ಸೇರಿದಂತೆ ಇತರ ಗ್ರಾಮಗಳ ಹಿರಿಯರು ಪಾಲ್ಗೊಂಡಿದ್ದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
19/06/2026 08:45 pm
LOADING...