ಮುಂಬೈ / ಬೆಳಗಾವಿ : ಕರ್ನಾಟಕದ ಬೆಳಗಾವಿ ಜಿಲ್ಲೆಯ ಗೋಕಾಕ್ನಲ್ಲಿರುವ ಶ್ರೀ ಮಹಾಲಕ್ಷ್ಮಿ ಅರ್ಬನ್ ಕೋ ಆಪರೇಟಿವ್ ಕ್ರೆಡಿಟ್ ಬ್ಯಾಂಕ್ನ ಪರವಾನಗಿಯನ್ನು (ಲೈಸೆನ್ಸ್) ಭಾರತೀಯ ರಿಸರ್ವ್ ಬ್ಯಾಂಕ್ ತಕ್ಷಣದಿಂದಲೇ ಜಾರಿಗೆ ಬರುವಂತೆ ರದ್ದುಗೊಳಿಸಿದೆ.
ಜೂನ್ 18 ರಿಂದ ಜಾರಿಗೆ ಬರುವಂತೆ ಬ್ಯಾಂಕಿನ ಯಾವುದೇ ರೀತಿಯ ವಹಿವಾಟು ನಡೆಸದಂತೆ ಕಟ್ಟುನಿಟ್ಟಿನ ನಿರ್ಬಂಧ ಹೇರಲಾಗಿದೆ.
ಲೈಸೆನ್ಸ್ ರದ್ದತಿಗೆ ಕಾರಣ
ಬ್ಯಾಂಕಿನ ಹಣಕಾಸು ಪರಿಸ್ಥಿತಿ ತೀವ್ರವಾಗಿ ಹದೆಗೆಟ್ಟಿರುವುದು, ಗ್ರಾಹಕರಿಗೆ ಹಣ ಪಾವತಿಸಲು ಬ್ಯಾಂಕ್ ಅಸಮರ್ಥವಾಗಿರುವುದು, ಬ್ಯಾಂಕಿನಲ್ಲಿ ಸಾಕಷ್ಟು ಬಂಡವಾಳ ಇಲ್ಲದೇ ಇರುವುದು ಮತ್ತು ಭವಿಷ್ಯದಲ್ಲಿ ಬ್ಯಾಂಕ್ ಲಾಭದತ್ತ ಮರಳುವ ಯಾವುದೇ ಆಶಾಭಾವನೆ ಕಾಣಿಸದಿರುವುದು.
ಲಿಕ್ವಿಡೇಟರ್ ನೇಮಕ
ಬ್ಯಾಂಕಿನ ವ್ಯವಹಾರಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ಮತ್ತು ಮುಕ್ತಾಯಗೊಳಿಸಲು ಲಿಕ್ವಿಡೇಟರ್ ನೇಮಿಸುವಂತೆ ಕರ್ನಾಟಕ ಸಹಕಾರ ಸಂಘಗಳ ರಿಜಿಸ್ಟ್ರಾರ್ ಅವರು ಆರ್ಬಿಐಗೆ ಮನವಿ ಮಾಡಿದ್ದಾರೆ.
ಠೇವಣಿದಾರರು ಸೇಫ್
ಬ್ಯಾಂಕ್ ದಿವಾಳಿಯಾದರೂ (Liquidation) ಶೇ. 97.9 ರಷ್ಟು ಠೇವಣಿದಾರರು ಸುರಕ್ಷಿತವಾಗಿದ್ದಾರೆ. ಡಿಐಸಿಜಿಸಿ (DICGC - Deposit Insurance And Credit Guarantee Corporation) ಇಲಾಖೆಯ ನಿಯಮಾವಳಿಗಳ ಪ್ರಕಾರ, ಪ್ರತಿಯೊಬ್ಬ ಠೇವಣಿದಾರರು ತಮ್ಮ ಠೇವಣಿಯ ಮೊತ್ತಕ್ಕೆ 5 ಲಕ್ಷ ರೂಪಾಯಿಗಳವರೆಗಿನ ವಿಮಾ ಹಣದ ಮರುಪಾವತಿ ಪಡೆಯಲು ಅರ್ಹರಾಗಿರುತ್ತಾರೆ. ಇದರಿಂದಾಗಿ ಬ್ಯಾಂಕಿನ ಬಹುತೇಕ ಗ್ರಾಹಕರಿಗೆ ದೊಡ್ಡ ಮಟ್ಟದ ನಷ್ಟವಾಗುವುದಿಲ್ಲ.
ಕಾಯ್ದೆ ಉಲ್ಲಂಘನೆ
ಈ ಬ್ಯಾಂಕು ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ 1949 ರ ಪ್ರಕಾರ ಆರ್ಬಿಐ ನಿಬಂಧನೆಗಳನ್ನು ಸರಿಯಾಗಿ ಅನುಸರಿಸಿರಲಿಲ್ಲ. ಬ್ಯಾಂಕ್ ಅನ್ನು ಹೀಗೆಯೇ ಮುಂದುವರಿಸಲು ಬಿಟ್ಟರೆ ಠೇವಣಿದಾರರ ಹಿತಾಸಕ್ತಿಗೆ ಧಕ್ಕೆ ಉಂಟಾಗುತ್ತದೆ ಎಂದು ಆರ್ಬಿಐ ಈ ಕ್ರಮ ಕೈಗೊಂಡಿದೆ.
PublicNext
19/06/2026 10:33 pm