ಚಿಕ್ಕೋಡಿ:ಬೆಳಗಾವಿಯಲ್ಲಿ ಜೂನ್ 22 ರಂದು ಎಂಈಎಸ್ ನಾಯಕರು ಹಮ್ಮಿಕೊಂಡಿರುವ ಕನ್ನಡ ಕಡ್ಡಾಯದ ವಿರುದ್ಧದ ಪ್ರತಿಭಟನಾ ಮೋರ್ಚಾಕ್ಕೆ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು ಮತ್ತು ಪ್ರಚೋದನಾಕಾರಿ ನಾಯಕರನ್ನು ಮುಂಜಾಗ್ರತಾ ಕ್ರಮವಾಗಿ ಬಂಧಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಚಿಕ್ಕೋಡಿ ತಾಲೂಕು ಘಟಕದ ವತಿಯಿಂದ ಉಪವಿಭಾಗೀಯ ದಂಡಾಧಿಕಾರಿಗಳ ಮೂಲಕ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಕೆಯ ಬಳಿಕ ಮಾತನಾಡಿದ ಕರವೇ ಚಿಕ್ಕೋಡಿ ತಾಲೂಕಾ ಅಧ್ಯಕ್ಷರಾದ ಸಂಜು ಬಡಿಗೇರ ಬೆಳಗಾವಿ ಕನ್ನಡದ ನೆಲ ಕಳೆದ ಐದು ದಶಕಗಳಿಂದ ಭಾಷಾ ರಾಜಕಾರಣ ಮಾಡುತ್ತಾ, ಮುಗ್ಧ ಮರಾಠಿ ಭಾಷಿಕರನ್ನು ಸರ್ಕಾರದ ವಿರುದ್ಧ ಎತ್ತಿಕಟ್ಟುತ್ತಿರುವ ನಾಡದ್ರೋಹಿ ಎಂಈಎಸ್ ನಾಯಕರನ್ನು ತಕ್ಷಣವೇ ಮಹಾರಾಷ್ಟ್ರಕ್ಕೆ ಗಡಿಪಾರು ಮಾಡಬೇಕು. ಅವರ ಜೂನ್ 22ರ ಪ್ರತಿಭಟನೆಗೆ ಜಿಲ್ಲಾಡಳಿತ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಸಮಾಜ ಸೇವಕ ಚಂದ್ರಕಾಂತ ಹುಕ್ಕೇರಿ ಮಾತನಾಡಿ ಕನ್ನಡದ ನೆಲ-ಜಲ ಹಾಗೂ ಸರ್ಕಾರದ ಸವಲತ್ತುಗಳನ್ನು ಉಣ್ಣುತ್ತಾ ಕನ್ನಡಕ್ಕೆ ದ್ರೋಹ ಬಗೆಯುವ ಎಂಈಎಸ್ ಕಾರ್ಯ ಖಂಡನೀಯ. ಒಂದು ವೇಳೆ ರಾಜಕೀಯ ಒತ್ತಡಕ್ಕೆ ಮಣಿದು ಜಿಲ್ಲಾಡಳಿತ ಎಂಈಎಸ್ ಮೋರ್ಚಾಕ್ಕೆ ಅನುಮತಿ ನೀಡಿದರೆ, ಅದಕ್ಕೆ ಪ್ರತಿಯಾಗಿ ಜೂನ್ 22 ರಂದೇ ಬೆಳಗಾವಿಯಲ್ಲಿ ಲಕ್ಷಾಂತರ ಕರವೇ ಕಾರ್ಯಕರ್ತರೊಂದಿಗೆ 'ಕನ್ನಡವೇ ಸಾರ್ವಭೌಮ' ಸ್ವಾಭಿಮಾನಿ ರ್ಯಾಲಿ ನಡೆಸಲಾಗುವುದು. ಇದರಿಂದಾಗುವ ಶಾಂತಿ-ಸುವ್ಯವಸ್ಥೆಯ ಧಕ್ಕೆಗೆ ಜಿಲ್ಲಾಡಳಿತವೇ ಹೊಣೆಯಾಗಬೇಕಾಗುತ್ತದೆ" ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಕರವೇ ಮುಖಂಡರಾದ ಮೋಹನ ಪಾಟೀಲ, ಲಕ್ಷ್ಮಿಕಾಂತ ಖೋತ, ಅಮೂಲ ನಾವಿ, ರಮೇಶ ಡಂಗೇರ, ಅನೀಲ ನಾವಿ ಸೇರಿದಂತೆ ಹಲವಾರು ಕನ್ನಡ ಹೋರಾಟಗಾರರು ಉಪಸ್ಥಿತರಿದ್ದರು.
Kshetra Samachara
20/06/2026 04:52 pm
LOADING...