ಮಂಗಳೂರು: ನಗರದ ಮಂಗಳಾದೇವಿ ಸಮೀಪ ನಿರ್ಮಿಸಲಾದ ಬಸ್ ಟರ್ಮಿನಲ್ ನಲ್ಲಿ ಬಸ್ಗಳೇ ನಿಲ್ಲುತ್ತಿಲ್ಲ. ಬದಲಾಗಿ ಖಾಸಗಿ ವಾಹನಗಳ ಪಾರ್ಕಿಂಗ್ ತಾಣವಾಗಿದ್ದು, ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಸ್ಮಾರ್ಟ್ ಸಿಟಿ ಯೋಜನೆಯಡಿ 4.50ಕೋಟಿ ರೂ.ನಲ್ಲಿ ಈ ಬಸ್ ಟರ್ಮಿನಲ್ 2024ರಲ್ಲಿ ನಿರ್ಮಾಣಗೊಂಡಿತ್ತು. ಬಿಜೆಪಿ ಹಾಗೂ ಕಾಂಗ್ರೆಸ್ನಿಂದ ಎಂದು ಈ ಬಸ್ ಟರ್ಮಿನಲ್ ಎರಡೆರಡು ಬಾರಿ ಉದ್ಘಾಟನೆಯೂ ಆಗಿತ್ತು. ಆದರೆ ಇನ್ನೂ ಟರ್ಮಿನಲ್ನಲ್ಲಿ ಬಸ್ಗಳ ಸಂಚಾರ ಆರಂಭವಾಗಿಲ್ಲ. ಪರಿಣಾಮ ಅದು ಖಾಸಗಿ ವಾಹನಗಳ ಪಾರ್ಕಿಂಗ್ ತಾಣವಾಗಿ ಮಾರ್ಪಟ್ಟಿದೆ.
ಮಂಗಳಾದೇವಿ ದೇವಸ್ಥಾನದ ಮುಂಭಾಗ ವಿಶಾಲ ರಸ್ತೆಯಿದ್ದು, ಭಕ್ತರು ರಸ್ತೆಯ ನಡುವೆಯೇ ವಾಹನಗಳನ್ನು ಪಾರ್ಕ್ ಮಾಡುತ್ತಾರೆ. ಇದರಿಂದ ಬಸ್ಗಳ ನಿಲುಗಡೆಗೆ ಕಷ್ಟವಾಗುತ್ತಿದೆ. ಆದ್ದರಿಂದ ವಾಹನಗಳ ದಟ್ಟಣೆ ಕಡಿಮೆ ಮಾಡಲು ಪ್ರಾಥಮಿಕ ಆರೋಗ್ಯ ಕೇಂದ್ರ, ಪಶು ಆಸ್ಪತ್ರೆ ಜತೆ ಸುಮಾರು 4.5 ಕೋಟಿ ರೂ. ಮೊತ್ತದಲ್ಲಿ ಬಸ್ ಟರ್ಮಿನಲ್ ನಿರ್ಮಿಸಲಾಗಿದೆ. ಇಲ್ಲಿ 110 ಮೀ. ಉದ್ದದ ಬಸ್ ಲೇನ್, ಪ್ರಯಾಣಿಕರ ತಂಗುದಾಣ, ಫುಟ್ಪಾತ್, ಉದ್ಯಾನವನ, ಹೈಮಾಸ್ಟ್ ಮತ್ತು ಸಿಎಫ್ಎಲ್ ದೀಪ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.
ಟರ್ಮಿನಲ್ ಬಳಕೆಗೆ ಸಂಬಂಧಿಸಿ ಸ್ಮಾರ್ಟ್ಸಿಟಿ ಸಂಸ್ಥೆ 2025ರ ಮಾ.5ರಂದು ಮಹಾನಗರ ಪಾಲಿಕೆಗೆ ಪತ್ರ ಬರೆದಿತ್ತು. ಬಳಿಕ ಪಾಲಿಕೆ ಮಾರ್ಚ್ 12ರಂದು ಪ್ರಾದೇಶಿಕ ಸಾರಿಗೆ ಪ್ರಾಧಿಕಾರಕ್ಕೆ ಪತ್ರ ರವಾನಿಸಿ ಕ್ರಮಕ್ಕೆ ಮನವಿ ಮಾಡಿತ್ತು. ಆದರೂ ಟರ್ಮಿನಲ್ ಬಳಿಗೆ ಬಸ್ಗಳು ಬರುತ್ತಿಲ್ಲ.
ಒನ್ವೇ ವ್ಯವಸ್ಥೆಯಿಂದ ಬಸ್ಗಳ ವೇಳಾಪಟ್ಟಿಗೆ ವ್ಯತ್ಯಾಸ ಉಂಟಾಗುವ ಕಾರಣ ಆರ್ಟಿಒ ಅಧಿಸೂಚನೆ ಅಗತ್ಯ ಎಂದು ಖಾಸಗಿ ಬಸ್ ಮಾಲೀಕರು ಮನವಿ ಮಾಡಿದ್ದಾರೆ. ಕೆಲ ದಿನಗಳ ಹಿಂದೆ ಡಿಸಿಪಿ ಸಹಿತ ಸಂಚಾರ ಪೊಲೀಸರ ತಂಡ ಸ್ಥಳಕ್ಕೆ ಭೇಟಿ ನೀಡಿ, ಬಳಿಕ ನಡೆದ ಸಭೆಯಲ್ಲಿ ಸಭೆಯಲ್ಲಿ ಬಹಳಷ್ಟು ವಿಷಯಗಳ ಚರ್ಚೆ ನಡೆದಿತ್ತು. ಆದರೂ ಟರ್ಮಿನಲ್ ಮಾತ್ರ ಇನ್ನೂ ಬಳಕೆಗೆ ಬಂದಿಲ್ಲ. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕಾಗಿದೆ.
PublicNext
20/06/2026 08:04 pm