ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಆರಂಭದಲ್ಲೇ ಮುಂಗಾರು ಮುನಿಸಿಕೊಂಡಿದ್ದು, ಭದ್ರಾ ನದಿ ಇದೀಗ ಸಂಪೂರ್ಣ ಬತ್ತುವ ಹಂತ ತಲುಪಿದೆ. ಮುಂಗಾರು ಮಳೆಯ ತೀವ್ರ ಕೊರತೆಯಿಂದಾಗಿ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಸೇತುವೆ ಬಳಿ ನದಿಯ ನೀರಿನ ಮಟ್ಟ ತೀವ್ರ ತಳಮಟ್ಟಕ್ಕೆ ಕುಸಿದಿದ್ದು, ಬರೋಬ್ಬರಿ 30 ವರ್ಷಗಳ ಬಳಿಕ ಭದ್ರೆಯ ಒಡಲು ಸಂಪೂರ್ಣ ಬರಿದಾಗುವ ಹಂತಕ್ಕೆ ತಲುಪಿದೆ. ಪ್ರತಿ ವರ್ಷ ಜೂನ್ ತಿಂಗಳಲ್ಲಿ ಭೋರ್ಗರೆದು ಹರಿಯುತ್ತಾ ಪ್ರವಾಹದ ಪರಿಸ್ಥಿತಿ ನಿರ್ಮಿಸುತ್ತಿದ್ದ ಜೀವನದಿಯ ಈ ಇಂದಿನ ಸ್ಥಿತಿಯನ್ನು ಕಂಡು ಸ್ಥಳೀಯರಲ್ಲಿ ತೀವ್ರ ಆತಂಕ ಎದುರಾಗಿದೆ.
ಒಂದು ಕಾಲದಲ್ಲಿ ಭೋರ್ಗರೆವ ನೀರಿನ ರಭಸಕ್ಕೆ ಕಾಲಿಡಲೂ ಜನರು ಭಯ ಪಡುತ್ತಿದ್ದ ನದಿಯ ಒಡಲು, ಇಂದು ನೀರಿಲ್ಲದೆ ವಾಲಿಬಾಲ್ ಹಾಗೂ ಕ್ರಿಕೆಟ್ ಆಡುವ ಸ್ಥಳವಾಗಿ ಮಾರ್ಪಟ್ಟಿದೆ. ನದಿಯ ಮಧ್ಯಭಾಗದಲ್ಲೇ ಸ್ಥಳೀಯರು ವಾಲಿಬಾಲ್ ಆಡುತ್ತಿರುವುದು ಬರದ ಪರಿಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ. ನದಿಯನ್ನು ವೀಕ್ಷಿಸಲು ಬರುತ್ತಿರುವ ಪ್ರವಾಸಿಗರು ಕೂಡ ನದಿಯ ಈ ದಯನೀಯ ಸ್ಥಿತಿಯನ್ನು ಕಂಡು ಆಘಾತಕ್ಕೊಳಗಾಗಿದ್ದಾರೆ. ದಿನ ಕಳೆದಂತೆ ನೀರಿನ ಮಟ್ಟ ಮತ್ತಷ್ಟು ಕುಸಿಯುತ್ತಿದ್ದು, ಮುಂದಿನ ದಿನಗಳಲ್ಲಿ ಶೀಘ್ರವಾಗಿ ಮಳೆ ಬಾರದೇ ಇದ್ದರೆ ಭದ್ರಾ ನದಿ ಸಂಪೂರ್ಣವಾಗಿ ಬರಿದಾಗುವ ಭೀತಿ ಎದುರಾಗಿದೆ.
PublicNext
20/06/2026 09:11 pm
LOADING...