ಹುಕ್ಕೇರಿ : ‘ದೇವಿಯ ಜಡೆ’ ಎಂಬ ಮೂಢನಂಬಿಕೆಯ ಕಾರಣ ವರ್ಷಗಳ ಕಾಲ ಸುಕ್ಕುಗಟ್ಟಿದ ಕೂದಲನ್ನು ಹೊತ್ತು ಮಾನಸಿಕ ಹಾಗೂ ದೈಹಿಕ ಸಂಕಷ್ಟ ಅನುಭವಿಸುತ್ತಿದ್ದ ಬಾಲಕನಿಗೆ ನಿಡಸೋಸಿ ಸಿದ್ಧಸಂಸ್ಥಾನ ಮಠದ ಪೀಠಾಧಿಪತಿ ಡಾ. ಶಿವಲಿಂಗೇಶ್ವರ ಸ್ವಾಮೀಜಿ ಹೊಸ ಬದುಕಿನ ಭರವಸೆ ನೀಡಿದ್ದಾರೆ. ಸಮೀಪದ ಬಾಡ ಗ್ರಾಮದ ಯುವಕನ ಜಡೆಯನ್ನು ತಮ್ಮ ಸಮ್ಮುಖದಲ್ಲೇ ಕತ್ತರಿಸುವ ಮೂಲಕ ಮೂಢನಂಬಿಕೆಗೆ ಕತ್ತರಿ ಹಾಕಿ, ಬಾಲಕನಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಿದ್ದಾರೆ.
ಬಾಲ್ಯದಿಂದಲೇ ಯುವಕನ ಕೂದಲು ಸುಕ್ಕುಗಟ್ಟಿದ್ದರಿಂದ ಅದನ್ನು ‘ದೇವಿಯ ಜಡೆ’ ಎಂದು ಕುಟುಂಬದವರು ಹಾಗೂ ಸುತ್ತಮುತ್ತಲಿನವರು ನಂಬಿದ್ದರು. ಜಡೆ ಕತ್ತರಿಸಿದರೆ ಅಪಶಕುನ ಸಂಭವಿಸುತ್ತದೆ ಎಂಬ ಭಯದಿಂದ ಬಾಲಕ ಹಲವು ವರ್ಷಗಳ ಕಾಲ ತೊಂದರೆ ಅನುಭವಿಸುತ್ತಿದ್ದ. ಈ ಸಮಸ್ಯೆ ಆತನ ಶಿಕ್ಷಣ, ಆರೋಗ್ಯ ಮತ್ತು ದೈನಂದಿನ ಬದುಕಿನ ಮೇಲೂ ಪರಿಣಾಮ ಬೀರುತ್ತಿರುವುದನ್ನು ಗಮನಿಸಿದ ಶಾಲೆಯ ಶಿಕ್ಷಕರು, ಈ ವಿಷಯವನ್ನು ನಿಡಸೋಸಿ ಶ್ರೀಗಳ ಗಮನಕ್ಕೆ ತಂದಿದ್ದರು.
ಶಿಕ್ಷಕರ ಮನವಿಗೆ ತಕ್ಷಣ ಸ್ಪಂದಿಸಿದ ಡಾ. ಶಿವಲಿಂಗೇಶ್ವರ ಸ್ವಾಮೀಜಿ, ಬಾಲಕ ಹಾಗೂ ಕುಟುಂಬದವರಿಗೆ ಜಡೆಗೆ ಯಾವುದೇ ದೈವಿಕ ಸಂಬಂಧವಿಲ್ಲ ಎಂಬುದನ್ನು ವೈಜ್ಞಾನಿಕ ಹಾಗೂ ವೈಚಾರಿಕ ನೆಲೆಯಲ್ಲಿ ಮನವರಿಕೆ ಮಾಡಿಕೊಟ್ಟರು. ಬಳಿಕ ತಮ್ಮ ಸಮ್ಮುಖದಲ್ಲೇ ಜಡೆಯನ್ನು ಕತ್ತರಿಸಿ, ವರ್ಷಗಳಿಂದ ಕಾಡುತ್ತಿದ್ದ ಭಯದ ಸಂಕೋಲೆಯಿಂದ ಬಾಲಕನನ್ನು ಮುಕ್ತಗೊಳಿಸಿದರು.
PublicNext
23/07/2026 04:20 pm
LOADING...