ತಾಳಿಕೋಟಿ: ಐತಿಹಾಸಿಕ ತಾಳಿಕೋಟಿ ಪಟ್ಟಣದ ಆರಾಧ್ಯ ದೈವ ಶ್ರೀ ಖಾಸ್ಗತ ಶಿವಯೋಗಿಗಳ ಜಾತ್ರಾ ಮಹೋತ್ಸವದಲ್ಲಿ ಅತ್ಯಂತ ವಿಶಿಷ್ಟ ಹಾಗೂ ಅಪರೂಪದ ಸಂಪ್ರದಾಯವಾದ ಗೋಪಾಲಕಾವಲಿ ಮೊಸರು ಗಡಿಗೆ ಒಡೆಯುವ ಕಾರ್ಯಕ್ರಮ ಸಾವಿರಾರು ಭಕ್ತರ ಸಮ್ಮುಖದಲ್ಲಿ ಭಕ್ತಿಭಾವದಿಂದ ನೆರವೇರಿತು.
ಶ್ರೀ ಖಾಸ್ಗತೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಭಾನುವಾರ ಬೆಳಗಿನ ಜಾವ 5.45ಕ್ಕೆ ಶ್ರೀಮಠದ ಆವರಣದಲ್ಲಿ ಐತಿಹಾಸಿಕ ಗೋಪಾಲಕಾವಲಿ ಮೊಸರು ಗಡಿಗೆ ಒಡೆಯುವ ಸಾಂಪ್ರದಾಯಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೂ ಮುನ್ನ ಬೆಳಗಿನ ಜಾವ 4 ಗಂಟೆಗೆ ಧ್ವಜದ ಭವ್ಯ ಮೆರವಣಿಗೆ ಜರುಗಿತು. ಬಳಿಕ ಮಠದ ಆವರಣದಲ್ಲಿ ನಿರ್ಮಿಸಲಾದ ಗೋಪಾಲಕಾವಲಿ ಕಾರ್ಯಕ್ರಮವನ್ನು ವಿರಕ್ತಮಠದ ವೇದಮೂರ್ತಿ ಮಹಾಂತಯ್ಯ ನೆರವೇರಿಸಿದರು.
ಮೊಸರು ಗಡಿಗೆಯಲ್ಲಿ ಹಾಲು, ಜೇನುತುಪ್ಪ, ಹೂವು ಸೇರಿದಂತೆ ವಿವಿಧ ಪವಿತ್ರ ಪದಾರ್ಥಗಳನ್ನು ತುಂಬಲಾಗಿತ್ತು. ಗಡಿಗೆ ಒಡೆದ ತಕ್ಷಣ ಪ್ರಸಾದ ಪಡೆಯಲು ಭಕ್ತರು ಮುಗಿಬಿದ್ದ ದೃಶ್ಯಗಳು ಭಕ್ತಿ ಹಾಗೂ ಸಂಭ್ರಮದ ವಾತಾವರಣವನ್ನು ಮತ್ತಷ್ಟು ಹೆಚ್ಚಿಸಿತು. ಪ್ರಸಾದ ಪಡೆಯುವುದು ಪುಣ್ಯವೆಂಬ ನಂಬಿಕೆಯಿಂದ ಭಕ್ತರು ಅಪಾರ ಉತ್ಸಾಹ ತೋರಿದರು.
ಬೈಟ್: ವಿಜಯ ಸಿಂಗ್, ಮಾಜಿ ಪುರಸಭೆ ಸದಸ್ಯರು.
ಒಂಬತ್ತು ದಿನಗಳ ಈ ಐತಿಹಾಸಿಕ ಜಾತ್ರೆಯ ಎಂಟನೇ ದಿನವಾದ ಇಂದು ಮಧ್ಯಾಹ್ನದಿಂದ ಸಂಜೆವರೆಗೆ ಮಹಾಪ್ರಸಾದ ಕಾರ್ಯಕ್ರಮ ನಡೆಯಲಿದೆ. ನಾಳೆ ಬೆಳಿಗ್ಗೆ ಲಿಂಗೈಕ ಶ್ರೀ ಖಾಸ್ಗತರ ಬೆಳ್ಳಿ ಮಹಾಮೂರ್ತಿ ಹಾಗೂ ವಿರಕ್ತ ಮಹಾಸ್ವಾಮಿಗಳ ಭಾವಚಿತ್ರದ ಭವ್ಯ ಆನೆ ಅಂಬಾರಿ ಮೆರವಣಿಗೆ ಪಟ್ಟಣದಲ್ಲಿ ಸಾಗಲಿದೆ.
ತಾಳಿಕೋಟಿಯ ಶ್ರೀ ಖಾಸ್ಗತೇಶ್ವರ ಜಾತ್ರೆಯ ಈ ಮೊಸರು ಗಡಿಗೆ ಒಡೆಯುವ ಸಂಪ್ರದಾಯ ಶತಮಾನಗಳ ಇತಿಹಾಸವನ್ನು ಹೊಂದಿದ್ದು, ಧಾರ್ಮಿಕ ಭಕ್ತಿ, ಸಂಸ್ಕೃತಿ ಮತ್ತು ಪರಂಪರೆಯ ಸಮ್ಮಿಲನವಾಗಿ ಸಾವಿರಾರು ಭಕ್ತರನ್ನು ವರ್ಷಂಪ್ರತಿ ತನ್ನತ್ತ ಸೆಳೆಯುತ್ತಿದೆ.
ವಿಜಯ ಕಲಾಲ, ಪಬ್ಲಿಕ್ ನೆಕ್ಸ್ಟ್, ತಾಳಿಕೋಟೆ.
PublicNext
26/07/2026 07:43 pm
LOADING...