ಹಾವೇರಿ: ತುಂಗಾ ಮೇಲ್ದಂಡೆ ಯೋಜನೆಯ ಕಾಲುವೆಗೆ ನೀರು ಬಂದಿದ್ದರಿಂದ ಸಂತಸಗೊಂಡಿದ್ದ ಹಾವೇರಿ ಜಿಲ್ಲೆಯ ಅನ್ನದಾತರಿಗೆ ಜಿಲ್ಲಾಧಿಕಾರಿಗಳ ಆದೇಶ ಆತಂಕ ತಂದೊಡ್ಡಿದೆ. ಕಾಲುವೆಗೆ ನೀರು ಹರಿಸುತ್ತಿರುವುದು ಕೇವಲ ಕೆರೆ-ಕಟ್ಟೆ, ಹೊಂಡಗಳನ್ನು ತುಂಬಿಸಲು ಮತ್ತು ಜನ-ಜಾನುವಾರುಗಳ ಕುಡಿಯುವ ನೀರಿಗಾಗಿ ಮಾತ್ರ ಎಂದು ಜಿಲ್ಲಾಡಳಿತ ಆದೇಶಿಸಿದೆ.
ಇದರಿಂದ ಕಾಲುವೆಯಲ್ಲಿ ನೀರಿದ್ದರೂ ಬೆಳೆಗಳಿಗೆ ಬಳಸಲಾಗದ ಸ್ಥಿತಿ ರೈತರಿಗೆ ಎದುರಾಗಿದೆ. ಕಾಲುವೆಗೆ ನೀರು ಬಂದಿದ್ದು ಸಂತಸ ತಂದಿತ್ತಾದರೂ ಜಿಲ್ಲಾಡಳಿತದ ಆದೇಶ ಕೈಗೆ ಬಂದ ತುತ್ತು ಬಾಯಿಗೆ ಬಾರದಂತೆ ಮಾಡಿದೆ ಎಂದು ರೈತರು ದೂರಿದ್ದಾರೆ.
"ನಾವು ಬೆಳೆದ ಮೆಕ್ಕೆಜೋಳ, ಸೋಯಾಬಿನ್, ಹತ್ತಿ, ಶೇಂಗಾ ಸೇರಿದಂತೆ ವಿವಿಧ ಬೆಳೆಗಳಿಗೆ ನೀರಿನ ಅಗತ್ಯವಿತ್ತು. ಇತ್ತ ಅಂತರ್ಜಲ ಮಟ್ಟವೂ ಕುಸಿದಿದೆ. ಇಂತಹ ಸಂದರ್ಭದಲ್ಲಿ ಕಾಲುವೆಗೆ ನೀರು ಬಂದಿದ್ದು ಇಳುವರಿ ಬಂದಷ್ಟೇ ಖುಷಿ ನೀಡಿತ್ತು. ಆದರೆ ಜಿಲ್ಲಾಡಳಿತದ ಆದೇಶ ಇನ್ನಿಲ್ಲದ ಸಂಕಷ್ಟ ತಂದೊಡ್ಡಿದೆ" ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಡಳಿತವು ತಕ್ಷಣವೇ ಈ ಆದೇಶವನ್ನು ವಾಪಸ್ ಪಡೆಯಬೇಕೆಂದು ರೈತರು ಪಟ್ಟು ಹಿಡಿದಿದ್ದಾರೆ.
PublicNext
30/07/2026 01:32 pm
LOADING...