ಹಾನಗಲ್ : ಮುಂಗಾರು ಹಂಗಾಮಿನಲ್ಲಿ ತಾಲೂಕಿನ 3 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಿರುವ ಸೋಯಾ-ಅವರೆ ಬೆಳೆಯಲ್ಲಿ ಅಲ್ಲಲ್ಲಿ ಎಲೆ ತಿನ್ನುವ ಲದ್ದಿ ಹುಳು ಕೀಟ ಬಾಧೆ ಕಂಡುಬಂದಿರುತ್ತದೆ. ರೈತರು ತಕ್ಷಣ ಸೂಕ್ತ ಸಸ್ಯ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳುವಂತೆ ಕೃಷಿ ಇಲಾಖೆ ಸೂಚಿಸಿದೆ.
ಸೋಯಾ, ಅವರೆ ಬೆಳೆಯಲ್ಲಿ ಕಾಂಡದ ನೊಣ, ಸ್ಪೊಡೋಪ್ಟೆರಾ ಲದ್ದಿ ಹುಳು, ಶೇಂಗಾ ಬೆಳೆಯಲ್ಲಿ ಸುರುಳಿ ಪೂಚಿ ಹಾಗೂ ಶೇಂಗಾ ಕಾಯಿ ಕೊರಕ ಹುಳು ಪ್ರಮುಖ ಕೀಟಗಳಾಗಿವೆ. ಈ ಕೀಟಗಳು ಬೆಳೆಗೆ ಹಾನಿ ಉಂಟು ಮಾಡುತ್ತವೆ. ಕೀಟ ನಿಯಂತ್ರಣಕ್ಕೆ ಸಮಗ್ರ ಕೀಟ ನಿರ್ವಹಣೆ ಪದ್ಧತಿಯನ್ನು ಅನುಸರಿಸುವುದು ಪರಿಣಾಮಕಾರಿಯಾಗಿದೆ.
ಕೀಟ ಬಾಧೆಯ ಆರಂಭಿಕ ಹಂತದಲ್ಲಿ ಪ್ರತಿ ಲೀಟರ್ ನೀರಿಗೆ 5 ಮಿ.ಲೀ ಬೇವಿನ ಎಣ್ಣೆ ಬೆರೆಸಿ ಸಿಂಪಡಿಸುವುದು, ಪ್ರತಿ ಎಕರೆಗೆ 4 ರಿಂದ 5 ಲಿಂಗಾಕರ್ಷಕ ಬಲೆಗಳು, 10 ಹಳದಿ ಅಂಟು ಬಲೆಗಳು ಹಾಗೂ 20 ರಿಂದ 30 'ಟಿ' ಆಕಾರದ ಪಕ್ಷಿ ಆಸರೆಗಳನ್ನು ಅಳವಡಿಸಬೇಕು.
ಕೀಟ ಬಾಧೆ ತೀವ್ರವಾಗಿದ್ದರೆ ಕ್ಲೋರಾಂಟ್ರಾನಿಲಿಪ್ರೋಲ್ 18.5% SC (0.3 ಮಿ.ಲೀ/ಲೀಟರ್), ಇಮಾಮೆಕ್ಟಿನ್ ಬೆಂಜೊಯೇಟ್ 5% SG (0.5 ಗ್ರಾಂ/ಲೀಟರ್) ಅಥವಾ ಕ್ಲೋರ್ಪೈರಿಫಾಸ್ 20% EC (2.0 ಮಿ.ಲೀ/ಲೀಟರ್) ಪ್ರಮಾಣದಲ್ಲಿ ಯಾವುದೇ ಒಂದು ಕೀಟನಾಶಕವನ್ನು ನೀರಿಗೆ ಬೆರೆಸಿ ಸಿಂಪಡಿಸಬೇಕು.
ಸೋಯಾ ಮತ್ತು ಅವರೆ ಬೆಳೆದಿರುವ ರೈತರು ತಮ್ಮ ಹೊಲಗಳನ್ನು ನಿರಂತರವಾಗಿ ಪರಿಶೀಲಿಸಿ, ಕೀಟ ಬಾಧೆ ಕಂಡುಬಂದ ತಕ್ಷಣ ಅಗತ್ಯ ನಿಯಂತ್ರಣ ಕ್ರಮಗಳನ್ನು ಕೈಗೊಂಡು ಬೆಳೆಯನ್ನು ಸಂರಕ್ಷಿಸಿಕೊಳ್ಳುವಂತೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿ.ಟಿ. ಸುರೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
PublicNext
05/08/2026 06:29 pm
LOADING...