ರಬಕವಿ-ಬನಹಟ್ಟಿ : ಬಣಜಿಗ ಸಮಾಜಕ್ಕೆ ಕೇವಲ ಶಿಕ್ಷಣದ ದೃಷ್ಟಿಯಿಂದ 2ಎ ಮೀಸಲಾತಿ ನೀಡಲಾಗಿದೆ. ಆದರೆ ಉದ್ಯೋಗ (ನೌಕರಿ) ನೀಡುವಾಗ 3ಬಿ ಎಂದು ಪರಿಗಣಿಸಲಾಗುತ್ತದೆ. ಇದರಿಂದ ನಾವು ಶಿಕ್ಷಣದಲ್ಲಿ ಸಾಕಷ್ಟು ಸಾಧನೆ ಮಾಡಿದರೂ ಮೀಸಲಾತಿ ಸಮಸ್ಯೆಯಿಂದ ನೌಕರಿಯಿಂದ ವಂಚಿತರಾಗುತ್ತಿದ್ದೇವೆ ಎಂದು ಇಲ್ಲಿನ ಬಣಜಿಗ ಸಮಾಜದ ಹಿರಿಯ ಅಶೋಕ ಮಹಾಬಳಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.
ಬಣಜಿಗ ಸಮಾಜಕ್ಕೆ ನೌಕರಿಗಳಲ್ಲಿಯೂ 2ಎ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ ಸೋಮವಾರ ತೇರದಾಳ ತಾಲೂಕು ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಮುಖ್ಯಮಂತ್ರಿ ಡಿಕೆ ಶಿವಕುಮಾರ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ ಅವರಿಗೆ ಬರೆದ ಮನವಿ ಪತ್ರವನ್ನು ತೇರದಾಳ ತಹಸೀಲ್ದಾರ್ ಮುಖಾಂತರ ಸಲ್ಲಿಸಿ ಅವರು ಮಾತನಾಡಿದರು.
ಬಣಜಿಗ ಸಮಾಜ ಚಿಕ್ಕದಾದರೂ ಚೊಕ್ಕದಾಗಿದೆ. ಈ ನಾಡಿನ ಏಳಿಗೆಗಾಗಿ ಆಧ್ಯಾತ್ಮಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿಯೂ ಕೊಡುಗೆ ನೀಡಿದೆ. ಇಂತಹ ಸಮಾಜದವರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಸರ್ಕಾರವು ನಮ್ಮ 2ಎ ಮೀಸಲಾತಿ ಬೇಡಿಕೆಗೆ ಸ್ಪಂದಿಸುವ ಮೂಲಕ ಬಣಜಿಗ ಸಮಾಜಕ್ಕೆ ನ್ಯಾಯ ಒದಗಿಸಿಕೊಡಬೇಕು ಎಂದು ಸಮಾಜದ ಪರವಾಗಿ ಹಕ್ಕೊತ್ತಾಯ ಮಾಡಿದರು.
ಪೇಟೆ ಭಾಗದ ಮಲ್ಲಿಕಾರ್ಜುನ ದೇವಸ್ಥಾನದಿಂದ ಪಾದಯಾತ್ರೆಯ ಮೂಲಕ ತಹಸೀಲ್ದಾರ್ ಕಚೇರಿಗೆ ಆಗಮಿಸಿ ಉಪತಹಸೀಲ್ದಾರ್ ಎಸ್.ಎಲ್. ಕಾಗಿಯವರ ಅವರಿಗೆ ಮನವಿ ಸಲ್ಲಿಸಲಾಯಿತು. ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ರವಾನಿಸಲಾಗುವುದು ಎಂದು ಕಾಗಿಯವರು ತಿಳಿಸಿದರು.
ಈ ಸಂದರ್ಭದಲ್ಲಿ ಬಣಜಿಗ ಸಮಾಜದ ತೇರದಾಳ ತಾಲೂಕು ಅಧ್ಯಕ್ಷ ಮಹೇಶ ಯಾದವಾಡ, ನಗರ ಘಟಕ ಅಧ್ಯಕ್ಷ ಶ್ರೀಶೈಲ ಮೋದಿ, ಯುವ ಘಟಕದ ತಾಲೂಕು ಅಧ್ಯಕ್ಷ ಪ್ರಮೋದ ಸೊಟ್ಟಿ, ಮಲ್ಲಿಕಾರ್ಜುನ ದೇವಸ್ಥಾನ ಟ್ರಸ್ಟ್ ಸಮಿತಿ ಅಧ್ಯಕ್ಷ ಬಾಲಚಂದ್ರ ಯಾದವಾಡ, ಜೀರ್ಣೋದ್ಧಾರ ಸೇವಾ ಸಮಿತಿ ಅಧ್ಯಕ್ಷ ಅಪ್ಪು ಮಂಗಸೂಳಿ, ನಗರ ಘಟಕ ಉಪಾಧ್ಯಕ್ಷ ಗಿರೀಶ ಯಾದವಾಡ, ಸಂತೋಷ ಮಹಾಬಳಶೆಟ್ಟಿ ಉಪಸ್ಥಿತರಿದ್ದರು.
Kshetra Samachara
03/08/2026 05:16 pm
LOADING...