ಬೆಂಗಳೂರು: ಅದು ಮೂತ್ರ ವಿಸರ್ಜನೆ ವಿಚಾರಕ್ಕೆ ಶುರುವಾಗಿದ್ದ ಸಣ್ಣ ಕಿರಿಕ್. ಆದ್ರೆ ಆದಾಗಲೇ ಎಣ್ಣೆ ಮತ್ತಲ್ಲಿದ್ದ ವ್ಯಕ್ತಿಯನ್ನು ನೋಡನೋಡುತ್ತಿದ್ದಂತೆ ಮತ್ತೊಬ್ಬ ಒಂದೇ ಏಟಿಗೆ ಅಡ್ಡಡ್ಡ ಮಲಗಿಸಿಬಿಟ್ಟಿದ್ದ. ಸದ್ಯ ವ್ಯಕ್ತಿ ಕೊಂದು ಎಸ್ಕೇಪ್ ಆಗಿದ್ದವನನ್ನು ಒಂದು ವಾರದ ನಂತರ ಪೊಲೀಸ್ರು ಲಾಕ್ ಮಾಡಿದ್ದಾರೆ.
ಯೆಸ್,ಕಳೆದ ಮಂಗಳವಾರ ರಾತ್ರಿ ಲಗ್ಗೇರಿ ಬಳಿ ನಡೆದಿದ್ದ ಕುಮಾರ್ ಕೊಲೆ ಪ್ರಕರಣಕ್ಕೆ ಈಗ ಕ್ಲೈಮ್ಯಾಕ್ಸ್ ಸಿಕ್ಕಿದೆ. ರಸ್ತೆ ಬದಿಯಲ್ಲಿ ಮೂತ್ರ ವಿಸರ್ಜನೆ ಮಾಡೋ ವಿಚಾರಕ್ಕೆ ಶುರುವಾದ ಕಿರಿಕ್,ಅಡುಗೆ ಭಟ್ಟನಾಗಿದ್ದ ಕುಮಾರ್ ಎಂಬಾತನ ಕೊಲೆಯಲ್ಲಿ ಅಂತ್ಯವಾಗಿತ್ತು.ಘಟನೆ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದ ಮಹಾಲಕ್ಷ್ಮಿ ಲೇಔಟ್ ಪೊಲೀಸರು, ಕೊನೆಗೂ ಆರೋಪಿ ಮೊಹಮ್ಮದ್ ಯೂನಸ್ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಷ್ಟಕ್ಕೂ ಕಳೆದ ಮಂಗಳವಾರ ರಾತ್ರಿ ನಡೆದಿದ್ದಾದ್ರೂ ಏನು ಅಂದ್ರೆ, ಕೊಲೆಯಾದ ಕುಮಾರ್ ರಸ್ತೆ ಬದಿಯಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದ.ಈ ವೇಳೆ ಅಲ್ಲಿಗೆ ಬಂದ ಯೂನಸ್,ಯಾಕೆ ಇಲ್ಲಿ ಮೂತ್ರ ವಿಸರ್ಜನೆ ಮಾಡ್ತೀಯಾ ಎಂದು ಪ್ರಶ್ನೆ ಮಾಡಿದ್ದ.ಇದರಿಂದ ಕೋಪಗೊಂಡ ಕುಮಾರ್, ಅವಾಚ್ಯ ಶಬ್ದಗಳಿಂದ ಯೂನಸ್ನನ್ನು ನಿಂದಿಸಿದ್ದ. ಯಾವಾಗ ಕಿರಿಕ್ ಜೋರಾಯ್ತೋ ಕುಮಾರ್ ಜೊತೆಯಲ್ಲಿದ್ದ ಸ್ನೇಹಿತ ಇಬ್ಬರ ಜಗಳವನ್ನು ಬಿಡಿಸಿ ಕುಮಾರ್ನನ್ನು ಅಲ್ಲಿಂದ ಕರೆದುಕೊಂಡು ಬಂದು ಬೈಕ್ ಮೇಲೆ ಕೂರಿಸಿಕೊಂಡು ಮನೆಗೆ ಕಡೆ ಹೊರಟ್ಟಿದ್ದ. ಆಗಲೇ ನೋಡಿ ಯಡವಟ್ಟಾಗಿದ್ದು.
ಕುಮಾರ್ ಬೈಕ್ ಮೇಲೆ ಕುಳಿತು ಮನೆ ಕಡೆ ಹೊರಟರೂ ಸಹ ಆರೋಪಿ ಯೂನಸ್ನ ಕೋಪ ಮಾತ್ರ ತಣ್ಣಗಾಗಿರಲಿಲ್ಲ.ಏಕಾಏಕಿ ನುಗ್ಗಿ ಬಂದ ಯೂನಸ್, ಬೈಕ್ ಮೇಲಿದ್ದ ಕುಮಾರ್ ಮುಖಕ್ಕೆ ಬಲವಾಗಿ ಪಂಚ್ ಕೊಟ್ಟಿದ್ದ. ಹೊಡೆತದ ರಭಸಕ್ಕೆ ಕುಮಾರ್ ಗಾಡಿಯಿಂದ ಕೆಳಗೆ ಬಿದ್ದುಬಿಟ್ಟಿದ್ದ. ನೆಲಕ್ಕೆ ಬಿದ್ದ ತಕ್ಷಣ ತಲೆಗೆ ಬಲವಾದ ಪೆಟ್ಟು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದ.
ಈ ಹಿನ್ನೆಲೆ ಪ್ರಕರಣ ದಾಖಲಿಸಿಕೊಂಡಿದ್ದ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಘಟನೆ ನಡೆದು ವಾರದ ನಂತರ ಆರೋಪಿ ಮೊಹಮ್ಮದ್ ಯೂನಸ್ನನ್ನು ಲಾಕ್ ಮಾಡಿ ಜೈಲಿಗಟ್ಟಿದ್ದಾರೆ. ಅದೆನೇ ಹೇಳಿ. ಒಂದು ಕ್ಷಣದ ಕೋಪ ಇಡೀ ಜೀವನವನ್ನೇ ಹಾಳು ಮಾಡುತ್ತೆ ಎಂಬುದಕ್ಕೆ ಈ ಕೊಲೆ ಪ್ರಕರಣವೇ ಜೀವಂತ ಸಾಕ್ಷಿಯಾಗಿದೆ.
PublicNext
03/08/2026 06:56 pm