ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ರಕ್ಷಣೆಯ ಜೊತೆಗೆ ರಥಬೀದಿಯ ಪಾವಿತ್ರ್ಯತೆಯನ್ನು ಉಳಿಸುವ ನಿಟ್ಟಿನಲ್ಲಿ ವ್ಯವಸ್ಥಾಪನಾ ಸಮಿತಿ, ಜೀರ್ಣೋದ್ಧಾರ ಸಮಿತಿಯ ಭಕ್ತರ ಸಭೆ ಕರೆದು ಎಲ್ಇಡಿ ಪರದೆಯ ಮೂಲಕ ಮಾಸ್ಟರ್ ಪ್ಲ್ಯಾನ್ ವಿವರಿಸಿಯೇ ಹೊಸ ರಸ್ತೆಯ ತೀರ್ಮಾನಕ್ಕೆ ಬರಲಾಗಿದ್ದು, ಈಗ ಅನಗತ್ಯವಾಗಿ ರಸ್ತೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಹೇಳಿದರು.
ಅವರು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ನಮ್ಮ ವ್ಯವಸ್ಥಾಪನಾ ಸಮಿತಿಯು ಅಧಿಕಾರಕ್ಕೆ ಬಂದ ಬಳಿಕ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ, ಶಾಸಕ ಅಶೋಕ್ ಕುಮಾರ್ ರೈ ಅವರ ಮಾರ್ಗದರ್ಶನದಲ್ಲಿ ಭಕ್ತರ ಸಹಕಾರದೊಂದಿಗೆ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳನ್ನು ವ್ಯವಸ್ಥಿತ ರೀತಿಯಲ್ಲಿ ನಡೆಸಲಾಗುತ್ತಿದ್ದು, ಸ್ವರ್ಣ ಕವಚಕ್ಕೆ ಈಗಾಗಲೇ 300 ಗ್ರಾಂ.ಗಿಂತಲೂ ಅಧಿಕ ಚಿನ್ನ ಸಮರ್ಪಣೆ, ದೇಣಿಗೆ ಸಮರ್ಪಣೆ, ತುಪ್ಪ ಸೇವೆ, ಎಳ್ಳೆಣ್ಣೆ ಅಭಿಷೇಕ, 40 ಲಕ್ಷ ರೂ. ಮೌಲ್ಯದ ಅಕ್ಕಿ ಸಮರ್ಪಣೆ, ಶಿಲಾಮಯ ಕಟ್ಟೆಗಳ ನಿರ್ಮಾಣ ಕಾರ್ಯ ನಡೆದಿದೆ. ಅನ್ನಪ್ರಸಾದ ವಿತರಣೆಯೂ ಅಚ್ಚುಕಟ್ಟಾಗಿ ನಡೆಯುತ್ತಿದ್ದು, ಕಟ್ಟಿಗೆ, ಗ್ಯಾಸ್ ವೆಚ್ಚ ಕಡಿತ ಮಾಡಲು ಸ್ಟೀಮ್ ವ್ಯವಸ್ಥೆಯನ್ನೂ ಮಾಡಿದ್ದೇವೆ. ಕ್ಷೇತ್ರದ ರಥಬೀದಿಯು ಸಂಚಾರಕ್ಕೆ ಮುಕ್ತ ಇರುವುದರಿಂದ ಗೋ ಕಳವು, ಕಸ ಹಾಕುವ ಕೃತ್ಯ, ವಾಹನಗಳ ನಿಲುಗಡೆ, ಆ್ಯಂಬುಲೆನ್ಸ್ ಗಳಲ್ಲಿ ಮೃತದೇಹಗಳ ಸಾಗಾಟ ಮೊದಲಾದ ಕೃತ್ಯಗಳಿಗೆ ಕಡಿವಾಣ ಹಾಕಬೇಕು ಎಂದು ದೇವಸ್ಥಾನ ಸಂರಕ್ಷಣಾ ಸಮಿತಿಯು ನೀಡಿದ ಮನವಿಯಂತೆ ಸಭೆ ಕರೆದು ಚರ್ಚಿಸಿ ಭಕ್ತರ ಗಮನಕ್ಕೆ ತಂದು ರಸ್ತೆ ನಿರ್ಮಾಣದ ತೀರ್ಮಾನಕ್ಕೆ ಬರಲಾಗಿದೆ. ಮುಂದೆ ಕ್ಷೇತ್ರದ ಸಂರಕ್ಷಣೆಯ ದೃಷ್ಟಿಯಿಂದ ಕ್ರ್ಷೇತ್ರಕ್ಕೆ ಆವರಣ ಗೋಡೆ, ಗೇಟ್ ಅಳವಡಿಕೆಯ ಕಾರ್ಯ ನಡೆಯಲಿದೆ ಎಂದರು.
PublicNext
03/08/2026 08:12 pm
LOADING...