ಕುಂದಾಪುರ: ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಸೋಮವಾರ ರಾತ್ರಿಯಿಂದ ಸುರಿದ ಭಾರೀ ಮಳೆಗೆ ಕುಂದಾಪುರ ಹೃದಯ ಭಾಗದ ಕುಂದಾಪುರ ಪುರಸಭಾ ವ್ಯಾಪ್ತಿಯ ಏಳನೇ ವಾರ್ಡಿನಲ್ಲಿ ಭಾರೀ ನೆರೆ ಬಂದಿದ್ದು ಬಹುತೇಕ ಎಲ್ಲಾ ಮನೆಗಳ ಒಳಗೆ ನುಗ್ಗಿದ ಪರಿಣಾಮ ಮನೆಯವರು ಕಂಗಾಲಾಗಿದ್ದಾರೆ. ವಲಸೆ ಕಾರ್ಮಿಕರ ಕುಟುಂಬಗಳಂತೂ ಸಂಪೂರ್ಣ ಮಳೆಯ ನೀರಿನಲ್ಲಿ ಮುಳುಗಿ ಹೋಗಿದ್ದು, ದಿನಸಿ ಸಾಮಾನುಗಳೂ ನೀರು ಪಾಲಾಗಿವೆ.
ಹೌದು, ಕಳೆದ ಕೆಲವು ವರ್ಷಗಳಿಂದ ರಾಷ್ಟ್ರೀಯ ಹೆದ್ದಾರಿ 66ರ ನಿರ್ಮಾಣದ ಸಂದರ್ಭದಿಂದ ಸರಿಯಾದ ಒಳಚರಂಡಿ ವ್ಯವಸ್ಥೆ ಇಲ್ಲದೇ ಇರುವುದೇ ಮಳೆ ನೀರಿನ ನೆರೆಗೆ ಕಾರಣ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಕುಂದಾಪುರದ ಪ್ರಸಿದ್ದ ಸಂತೆ ಮಾರುಕಟ್ಟೆಯ ಒಳಗೂ ನೀರು ನುಗ್ಗಿದ್ದು ಅವಾಂತರ ಸೃಷ್ಟಿಸಿದೆ. ಒಳಚರಂಡಿ ಹಾಗೂ ಸರ್ವಿಸ್ ರಸ್ತೆಯ ಸಮಸ್ಯೆಯಿಂದಾಗಿ ಕೃತಕ ನೆರೆ ಸೃಷ್ಟಿಯಾಗುತ್ತಿದೆ ಎಂದು ಪುರಸಭೆ ಸದಸ್ಯ ಶ್ರೀಧರ್ ಶೇರೆಗಾರ್ ಆರೋಪಿಸಿದ್ದಾರೆ.
ಮಳೆಗಾಲದ ಆರಂಭಕ್ಕೆ ಮುನ್ನವೇ ಹಲವಾರು ಬಾರಿ ಅತಿವೃಷ್ಟಿ ಸಮಸ್ಯೆಗೆ ಪೂರಕ ಸಿದ್ಧತೆಗಳನ್ನು ನಡೆಸುವ ಸಭೆಗಳನ್ನು ನಡೆಸಲಾಗಿದೆಯಾದರೂ, ಆ ಸಭೆಗಳು ಕೇವಲ ಕಾಲಹರಣಕ್ಕಾಗಿ ನಡೆದಿವೆ ಎನ್ನುವುದಕ್ಕೆ ಸೋಮವಾರ ಸುರಿದ ಭಾರೀ ಮಳೆ ಸಾಕ್ಷಿಯಾಗಿದೆ. ಇನ್ನಾದರೂ ಸಂಬಂಧಪಟ್ಟವರು ಎಚ್ಚೆತ್ತುಕೊಂಡು ಮುಂಜಾಗ್ರತಾ ಕ್ರಮ ಕೈಗೊಳ್ಳುವರೇ ಕಾದು ನೋಡಬೇಕಿದೆ.
ವಿಶೇಷ ವರದಿ: ಜಯಶೇಖರ್ ಮಡಪ್ಪಾಡಿ, ಪಬ್ಲಿಕ್ ನೆಕ್ಸ್ಟ್ ಕುಂದಾಪುರ
PublicNext
04/08/2026 06:45 pm
LOADING...