ಬೆಂಗಳೂರು: ರೌಡಿ ಶೀಟರ್ ಲಕ್ಷ್ಮೀನಾರಾಯಣ ಅಲಿಯಾಸ್ 'ಕಳ್ಳಪಿಳ್ಳೆ' ಎಂಬಾತನ ಹತ್ಯೆಗೆ ನಡೆದಿದ್ದ ಭಾರಿ ಸಂಚೊಂದನ್ನು ಸಿಸಿಬಿ ಪೊಲೀಸರು ತಮ್ಮ ಸಮಯಪ್ರಜ್ಞೆಯಿಂದ ತಡೆದಿದ್ದಾರೆ. ಸಿದ್ಧಾಪುರದ ದಾಸರ ಕಾಲೋನಿಯಲ್ಲಿ ಕೃತ್ಯಕ್ಕೆ ಜಸ್ಟ್ ಎರಡು ಗಂಟೆಗಳ ಮುನ್ನ ದಾಳಿ ನಡೆಸಿದ ಪೊಲೀಸರು, ಆರೋಪಿಗಳ ಪ್ಲಾನ್ ಧೂಳಿಪಟ ಮಾಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವ ಅಲಿಯಾಸ್ ಕಲ್ಕಿಶಿವ, ಗಿರೀಶ್ ಹಾಗೂ ಪೃಥ್ವಿ ಎಂಬ ಮೂವರನ್ನು ಬಂಧಿಸಲಾಗಿದೆ. ಬಂಧಿತರಿಂದ ಆರು ಲಾಂಗು-ಮಚ್ಚುಗಳು ಮತ್ತು ಕೃತ್ಯಕ್ಕೆ ಬಳಸಲಿದ್ದ ಆಟೋವನ್ನು ವಶಪಡಿಸಿಕೊಳ್ಳಲಾಗಿದೆ.
1995ರ ಕೊಲೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿ 2006ರಲ್ಲಿ ಹೊರಬಂದಿದ್ದ ಲಕ್ಷ್ಮೀನಾರಾಯಣ ಮತ್ತು ಕಲ್ಕಿ ಶಿವನ ನಡುವೆ ಇತ್ತೀಚೆಗೆ ನಡೆದ ಅಣ್ಣಮ್ಮ ಜಾತ್ರೆಯಲ್ಲಿ ತೀವ್ರ ಜಗಳವಾಗಿತ್ತು. ಇದರ ಸೇಡು ತೀರಿಸಿಕೊಳ್ಳಲು ಕಲ್ಕಿ ಶಿವ ತನ್ನ ಸಹಚರರೊಂದಿಗೆ ಸೇರಿ ಕೊಲೆಗೆ ಸಂಚು ರೂಪಿಸಿದ್ದನು.
ಸಂಜೆ 6 ಗಂಟೆಗೆ ದಾಸರ ಕಾಲೋನಿಯ ದೇವಾಲಯಕ್ಕೆ ಲಕ್ಷ್ಮೀನಾರಾಯಣ ಬರುವಾಗ ದಾಳಿ ಮಾಡಲು ಆರೋಪಿಗಳು ಆಟೋದಲ್ಲಿ ಮಾರಕಾಸ್ತ್ರಗಳೊಂದಿಗೆ ಸಿದ್ಧರಾಗಿದ್ದರು. ಆದರೆ, ಖಚಿತ ಮಾಹಿತಿ ಆಧರಿಸಿ ಸಂಜೆ 4 ಗಂಟೆಗೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಆರೋಪಿಗಳನ್ನು ಬಂಧಿಸಿ, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
PublicNext
04/08/2026 07:38 pm
LOADING...