ಹುಕ್ಕೇರಿ : ಶಾಲೆ ಎಂದರೆ ಜ್ಞಾನ ದೇಗುಲ. ಆದರೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಎಲ್ಲಿಮುನ್ನೋಳಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮೂಲಸೌಕರ್ಯದ ಕೊರತೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸವಾಲಾಗಿದೆ. 204 ವಿದ್ಯಾರ್ಥಿಗಳಿಗೆ ಕೇವಲ ಒಂದೇ ಒಂದು ಶೌಚಾಲಯ, ಅಪೂರ್ಣ ಕಾಮಗಾರಿ, ಮತ್ತೊಂದೆಡೆ ಕಿಡಿಗೇಡಿಗಳ ಹಾವಳಿಯಿಂದ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸಂಕಷ್ಟ ಎದುರಿಸುತ್ತಿದ್ದಾರೆ.
1984ರಲ್ಲಿ ಆರಂಭವಾದ ಎಲ್ಲಿಮುನ್ನೋಳಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಪ್ರಸ್ತುತ 204 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಆದರೆ ಇಷ್ಟೊಂದು ವಿದ್ಯಾರ್ಥಿಗಳಿಗೆ ಕೇವಲ ಒಂದೇ ಒಂದು ಶೌಚಾಲಯ ಇರುವುದರಿಂದ ಹೆಣ್ಣು ಮತ್ತು ಗಂಡು ಮಕ್ಕಳು ಸರದಿಯಲ್ಲಿ ನಿಂತು ಶೌಚಾಲಯ ಬಳಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಐದು-ಆರು ವರ್ಷಗಳ ಹಿಂದೆ ಆರಂಭವಾದ ನೂತನ ಶೌಚಾಲಯ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂದು ಮುಖ್ಯ ಶಿಕ್ಷಕ ಆನಂದ್ ಹುದ್ದಾರ ಅಳಲು ತೋಡಿಕೊಂಡಿದ್ದಾರೆ.
ಇನ್ನೊಂದೆಡೆ ಶಾಲಾ ಅವಧಿ ಮುಗಿದ ಬಳಿಕ ಸ್ಥಳೀಯ ಕಿಡಿಗೇಡಿಗಳು ಶಾಲಾ ಆವರಣ ಪ್ರವೇಶಿಸಿ ಗೇಟ್ ಮತ್ತು ಬೀಗಗಳನ್ನು ಮುರಿಯುವುದು, ಮದ್ಯಪಾನ, ಗುಟ್ಕಾ ಸೇವನೆ ಸೇರಿದಂತೆ ಅನೈತಿಕ ಚಟುವಟಿಕೆ ನಡೆಸುತ್ತಿರುವ ಆರೋಪ ಕೇಳಿಬಂದಿದೆ. ಇದರಿಂದ ಶಾಲೆಯ ಪರಿಸರವೇ ಅಶುಚಿಯಾಗುತ್ತಿದ್ದು, ಪೌರಕಾರ್ಮಿಕರಿಲ್ಲದ ಕಾರಣ ಶಿಕ್ಷಕರೇ ಸ್ವತಃ ಶೌಚಾಲಯಗಳನ್ನು ಸ್ವಚ್ಛಗೊಳಿಸುವ ಪರಿಸ್ಥಿತಿ ಎದುರಾಗಿದೆ. ಕೂಡಲೇ ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಅನುದಾನ ಬಿಡುಗಡೆ ಮಾಡಿ ಶೌಚಾಲಯ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಮುಖ್ಯ ಶಿಕ್ಷಕರು ಆಗ್ರಹಿಸಿದ್ದಾರೆ.
PublicNext
04/08/2026 10:16 pm
LOADING...