ಹಾನಗಲ್: ಸರ್ಕಾರಿ ಕಾಮಗಾರಿಗಳ ಗುಣಮಟ್ಟ ಮತ್ತು ಆಯುಷ್ಯದ ಬಗ್ಗೆ ಸಾರ್ವಜನಿಕರಲ್ಲಿ ಮತ್ತೆ ಅನುಮಾನ ಮೂಡುವಂತಹ ಘಟನೆಯೊಂದು ನಡೆದಿದೆ. ಹಾನಗಲ್ ಪಟ್ಟಣದ ತಾಲೂಕು ಕ್ರೀಡಾಂಗಣದ ಬಳಿ ಸುಮಾರು ₹5 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ರಾಜಕಾಲುವೆಯ ತಡೆಗೋಡೆ ನಿರ್ಮಾಣವಾದ ಕೇವಲ ಮೂರೇ ತಿಂಗಳಲ್ಲಿ ಸೋಮವಾರ ಏಕಾಏಕಿ ಕುಸಿದು ಬಿದ್ದಿದ್ದು, ಕಳಪೆ ಕಾಮಗಾರಿಯ ಆರೋಪಗಳು ಗಂಭೀರವಾಗಿ ಕೇಳಿಬಂದಿವೆ.
ಸಣ್ಣ ನೀರಾವರಿ ಇಲಾಖೆಯಡಿ ಕುಂದಾಪುರ ಮೂಲದ 'ಸನತ್ ಕನ್ಸ್ಟ್ರಕ್ಷನ್' ಕಂಪನಿ ನಿರ್ಮಿಸಿದ್ದ ಈ ತಡೆಗೋಡೆ ಕುಸಿದ ಪರಿಣಾಮ, ಪಕ್ಕದ ತೋಟದಲ್ಲಿದ್ದ ಸುಮಾರು 50ಕ್ಕೂ ಹೆಚ್ಚು ನಾಲ್ಕು ವರ್ಷದ ಅಡಿಕೆ ಗಿಡಗಳು ನೆಲಕ್ಕುರುಳಿವೆ. ಇದರಿಂದಾಗಿ ಸ್ಥಳೀಯ ರೈತನಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ.
"ಈ ಹಿಂದೆಯೂ ಇದೇ ತಡೆಗೋಡೆ ಒಮ್ಮೆ ಕುಸಿದಿತ್ತು. ಕಾಮಗಾರಿ ಆರಂಭದಿಂದಲೂ ನಿಯಮಗಳನ್ನು ಗಾಳಿಗೆ ತೂರಿ ಕಳಪೆಯಾಗಿ ಕೆಲಸ ಮಾಡಲಾಗುತ್ತಿದೆ ಎಂದು ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಸಮರ್ಪಕ ಪ್ರಮಾಣದಲ್ಲಿ ಕಬ್ಬಿಣ ಹಾಗೂ ಸಿಮೆಂಟ್ ಬಳಸದೇ ನಿರ್ಮಿಸಿದ್ದೇ ಈ ಅನಾಹುತಕ್ಕೆ ಕಾರಣ" ಎಂದು ಸಂಕಷ್ಟಕ್ಕೊಳಗಾದ ಜಮೀನಿನ ಮಾಲೀಕ ಗುರುರಾಜ ಏಸಕ್ಕನವರ್ ಆರೋಪಿಸಿದ್ದಾರೆ. ತಮಗೆ ಆದ ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕು ಹಾಗೂ ಕಳಪೆ ಕಾಮಗಾರಿ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಘಟನಾ ಸ್ಥಳಕ್ಕೆ ಹಿರಿಯ ಅಧಿಕಾರಿಗಳು ತಕ್ಷಣ ಭೇಟಿ ನೀಡಿ ಪರಿಶೀಲಿಸಬೇಕು ಮತ್ತು ಬೇಜವಾಬ್ದಾರಿ ತೋರಿದ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ (Blacklist) ಸೇರಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ಸಾರ್ವಜನಿಕರು ತೀವ್ರವಾಗಿ ಒತ್ತಾಯಿಸಿದ್ದಾರೆ.
PublicNext
04/08/2026 10:44 pm
LOADING...