ಕೋಲಾರ : ಕೋತಿಯನ್ನು ಶ್ರೀ ಆಂಜನೇಯ ಸ್ವಾಮಿಯ ಪ್ರತಿರೂಪವೆಂದು ಪೂಜಿಸುವ ಭಾರತೀಯ ಗ್ರಾಮೀಣ ಸಂಸ್ಕೃತಿಯ ಅಪರೂಪದ ಹಾಗೂ ಭಕ್ತಿಪ್ರಧಾನ ಘಟನೆಯೊಂದು ಕೋಲಾರ ತಾಲೂಕಿನ ತೊಟ್ಲಿ ಗ್ರಾಮದಲ್ಲಿ ನಡೆದಿದೆ. ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ಕೋತಿಯೊಂದಕ್ಕೆ ಗ್ರಾಮಸ್ಥರೆಲ್ಲರೂ ಸೇರಿ ಸಕಲ ಶಾಸ್ತ್ರೋಕ್ತವಾಗಿ ಅಂತ್ಯಸಂಸ್ಕಾರ ನೆರವೇರಿಸಿದ್ದಲ್ಲದೆ, ಇದೀಗ 11ನೇ ದಿನದ ‘ವೈಕುಂಠ ಸಮಾರಾಧನೆ’ ಕಾರ್ಯಕ್ರಮವನ್ನೂ ವೈಭವದಿಂದ ನೆರವೇರಿಸಿದ್ದಾರೆ.
ಕೆಲವು ದಿನಗಳ ಹಿಂದೆ ತೊಟ್ಲಿ ಗ್ರಾಮದ ವ್ಯಾಪ್ತಿಯಲ್ಲಿ ರಸ್ತೆ ಅಪಘಾತಕ್ಕೀಡಾಗಿ ಮೃತಪಟ್ಟಿದ್ದ ಕೋತಿಯನ್ನು ಕಂಡ ಗ್ರಾಮಸ್ಥರು, ಅದನ್ನು ಕೇವಲ ಪ್ರಾಣಿ ಎಂದು ಭಾವಿಸದೆ ಶ್ರೀ ಆಂಜನೇಯ ಸ್ವಾಮಿಯ ಸ್ವರೂಪವೆಂದು ನಂಬಿ ಭಕ್ತಿ-ಶ್ರದ್ಧೆಯಿಂದ ವಿಧಿವಿಧಾನಗಳ ಪ್ರಕಾರ ಅಂತ್ಯಸಂಸ್ಕಾರ ನೆರವೇರಿಸಿದ್ದರು.
ಅಂತ್ಯಸಂಸ್ಕಾರದ 11ನೇ ದಿನದ ಅಂಗವಾಗಿ ಕೋತಿಯ ಸಮಾಧಿ ಸ್ಥಳವನ್ನು ಹೂವುಗಳಿಂದ ಶೃಂಗರಿಸಿ, ವಿಶೇಷ ಪೂಜೆ ಹಾಗೂ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ವೈಕುಂಠ ಸಮಾರಾಧನೆಯ ನೆನಪಿನಲ್ಲಿ ಗ್ರಾಮಸ್ಥರೆಲ್ಲರೂ ಒಂದಾಗಿ ಸೇರಿ ನೂರಾರು ಜನರಿಗೆ ಮಹಾ ಪ್ರಸಾದ ವಿನಿಯೋಗ ಹಾಗೂ ಅನ್ನಸಂತರ್ಪಣೆ (ಊಟದ ವ್ಯವಸ್ಥೆ) ಏರ್ಪಡಿಸಿದ್ದರು. ಪ್ರಾಣಿಯೊಂದರ ಮೇಲಿರುವ ಗ್ರಾಮಸ್ಥರ ಭಕ್ತಿ ಹಾಗೂ ಪ್ರಾಣಿಪ್ರೇಮಕ್ಕೆ ಈ ಘಟನೆ ಸಾಕ್ಷಿಯಾಗಿದೆ.
PublicNext
05/08/2026 03:56 pm
LOADING...