ಬೆಂಗಳೂರು: ಉಚ್ಚ ನ್ಯಾಯಾಲಯ ಚಾಟಿ ಬೀಸಿದ ಆದೇಶದ ಬೆನ್ನಲ್ಲೇ, ಕೆ.ಆರ್. ಮಾರುಕಟ್ಟೆ ಅಂಗಳದಲ್ಲಿ ಸೃಷ್ಟಿಯಾಗಿದ್ದ ದಶಕಗಳ ಒತ್ತುವರಿ ಸಾಮ್ರಾಜ್ಯಕ್ಕೆ ಬಿಗ್ ಶಾಕ್ ಎದುರಾಗಿದೆ. ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಆಯುಕ್ತರಾದ ಜಗದೀಶ್ ಜಿ. ಅವರ ನೇತೃತ್ವದಲ್ಲಿ ಮೈಸೂರು ರಸ್ತೆ ಹಾಗೂ ವಿಕ್ಟೋರಿಯಾ ಆಸ್ಪತ್ರೆಯ ಕಾಂಪೌಂಡ್ ಗೋಡೆಗೆ ಅಂಟಿಕೊಂಡಿದ್ದ ಬರೋಬ್ಬರಿ 150 ಅಕ್ರಮ ಅಂಗಡಿಗಳ ಮೇಲೆ ಪಾಲಿಕೆ ಸೇನೆ ಏಕಾಏಕಿ ಎರಗಿದೆ.
ಸಾರ್ವಜನಿಕರ ಸಂಚಾರಕ್ಕೆ ಕಂಟಕವಾಗಿದ್ದ ಈ ಜಾಗವನ್ನು ತೆರವುಗೊಳಿಸಲು ಅಧಿಕಾರಿಗಳ ಪಡೆ ಮಿಂಚಿನ ಆಪರೇಷನ್ ಕೈಗೊಂಡಿದ್ದು, ಸ್ಥಳದಲ್ಲಿ ಹೈಡ್ರಾಮಾ ವಾತಾವರಣ ನಿರ್ಮಾಣವಾಗಿದೆ.
ಈ ಬೃಹತ್ ಒತ್ತುವರಿ ತೆರವು ಕಾರ್ಯಾಚರಣೆಗೆ 6 ಜೆಸಿಬಿಗಳು, ಕಟ್ಟಡದ ಅವಶೇಷಗಳನ್ನು ಸಾಗಿಸಲು 4 ಹತ್ತು ಚಕ್ರದ ಲಾರಿಗಳು ಹಾಗೂ 10 ಟ್ರ್ಯಾಕ್ಟರ್ಗಳು ಸಾಲಾಗಿ ನಿಂತಿವೆ. ಕೇವಲ ಯಂತ್ರಗಳಷ್ಟೇ ಅಲ್ಲದೆ, ಗ್ರೌಂಡ್ ಲೆವೆಲ್ನಲ್ಲಿ ಆಡಳಿತ ಯಂತ್ರವನ್ನು ಚುರುಕುಗೊಳಿಸಲು ಅಭಿವೃದ್ಧಿ ಅಪರ ಆಯುಕ್ತ ವೆಂಕಟಾಚಲಪತಿ, ಮುಖ್ಯ ಇಂಜಿನಿಯರ್ ವಿಜಯ್ ಕುಮಾರ್, ಜಂಟಿ ಆಯುಕ್ತ ಹೇಮಂತ್ ಮತ್ತು ಚಾಮರಾಜಪೇಟೆ ಕಾರ್ಯಪಾಲಕ ಇಂಜಿನಿಯರ್ಗಳ ತಂಡ ಸ್ಥಳದಲ್ಲೇ ಮೊಕ್ಕಾಂ ಹೂಡಿದೆ.
ಒಟ್ಟು 60 ಇಂಜಿನಿಯರ್ಗಳು ಹಾಗೂ 60 BSWML ಸಿಬ್ಬಂದಿ ಕಾರ್ಯಾಚರಣೆಯನ್ನು ಯುದ್ಧೋಪಾದಿಯಲ್ಲಿ ನಡೆಸುತ್ತಿದ್ದಾರೆ.
ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಇಡೀ ಮಾರುಕಟ್ಟೆ ಪ್ರದೇಶವನ್ನು ಪೊಲೀಸ್ ಕೋಟೆಯನ್ನಾಗಿ ಪರಿವರ್ತಿಸಲಾಗಿದೆ. KSRP ಪಡೆಯ ಕಟ್ಟುನಿಟ್ಟಿನ ಬಂದೋಬಸ್ತ್ನೊಂದಿಗೆ 20 ಹೆಲ್ತ್ ಸ್ಟಾಫ್, ಬೆಸ್ಕಾಂ ಹಾಗೂ ಫೈರ್ ಸಿಬ್ಬಂದಿ ತುರ್ತು ಸಂದರ್ಭ ಎದುರಿಸಲು ಅಂಬ್ಯುಲೆನ್ಸ್ ಸಹಿತ ಸನ್ನದ್ಧರಾಗಿದ್ದಾರೆ. ಕಾನೂನಿನ ಆದೇಶವನ್ನು ಅಕ್ಷರಶಃ ಪಾಲಿಸಲು ಹಿರಿಯ ಅಧಿಕಾರಿಗಳ ಶಿಸ್ತಿನ ದಂಡು ಕಣದಲ್ಲಿದ್ದು, ಪಾಲಿಕೆಯ ಈ ದೃಢ ಮತ್ತು ಕ್ರಾಂತಿಕಾರಿ ಆಕ್ಷನ್ ಮೋಡ್ಗೆ ನಗರದ ಜನತೆಯಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
PublicNext
05/08/2026 05:55 pm
LOADING...