ಭಟ್ಕಳ: ತಾಲೂಕಿನ ಜಾಲಿ ಗ್ರಾಮದ ಸ್ವಾಮಿ ವಿವೇಕಾನಂದ ಜನಸ್ಪಂದನ ಫೌಂಡೇಶನ್ (ರಿ.) ವತಿಯಿಂದ ಕಳೆದ ವರ್ಷದಂತೆ ಈ ವರ್ಷವೂ ‘ಕೃಷ್ಣ ಲೀಲಾ–02’ ಕಾರ್ಯಕ್ರಮವನ್ನು ಜಾಲಿಯ ನಾಮಧಾರಿ ಸಭಾಭವನದಲ್ಲಿ ಆಯೋಜಿಸಲಾಯಿತು.
ಪುಟಾಣಿಗಳಿಗಾಗಿ ಯಾವುದೇ ನೋಂದಣಿ ಶುಲ್ಕವಿಲ್ಲದೆ ವಿವಿಧ ಕೃಷ್ಣ ವೇಷಧಾರಿ ಸ್ಪರ್ಧೆ ಹಾಗೂ ಮಹಿಳೆಯರಿಗಾಗಿ ಚುಕ್ಕೆ ರಂಗೋಲಿ ಸ್ಪರ್ಧೆ ನಡೆಸಲಾಯಿತು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ₹30 ಸಾವಿರಕ್ಕೂ ಅಧಿಕ ಮೊತ್ತದ ಬಹುಮಾನಗಳನ್ನು ವಿತರಿಸಿ ಪ್ರೋತ್ಸಾಹಿಸಲಾಯಿತು.
ಕಾರ್ಯಕ್ರಮಕ್ಕೆ ಬ್ರಹ್ಮರ್ಷಿ ನಾರಾಯಣ ಗುರು ವೇದಿಕೆಯ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ವಿಶೇಷ ಅತಿಥಿಯಾಗಿ ಆಗಮಿಸಿದ್ದರು. ಗ್ರಾಮೀಣ ವ್ಯವಸಾಯ ಸಹಕಾರಿ ಸಂಘ, ಜಾಲಿ ಅಧ್ಯಕ್ಷ ಮಂಜಪ್ಪ ಎಂ. ನಾಯ್ಕ ಜಾಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಸ್ವಾಮಿ ವಿವೇಕಾನಂದ ಜನಸ್ಪಂದನ ಫೌಂಡೇಶನ್ ಭಟ್ಕಳ ತಾಲೂಕಿನಲ್ಲಿ ಗಮನಾರ್ಹ ಸಾಮಾಜಿಕ ಕಾರ್ಯಗಳನ್ನು ನಡೆಸುವ ಮೂಲಕ ಜನಮನ್ನಣೆ ಗಳಿಸಿದೆ’ ಎಂದರು.
ಫೌಂಡೇಶನ್ ಅಧ್ಯಕ್ಷ ವಸಂತ್ ಎಂ. ನಾಯ್ಕ ಜಾಲಿ ಮಾತನಾಡಿ, ಕಳೆದ ಎರಡು ವರ್ಷಗಳಲ್ಲಿ ಸಂಸ್ಥೆಯ ವತಿಯಿಂದ ಹಲವು ಜನಪರ, ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಲಾಗಿದೆ ಎಂದರು.
ಕ್ರಿಯಾಶೀಲ ಗೆಳೆಯರ ಬಳಗ, ಭಟ್ಕಳ ಅಧ್ಯಕ್ಷ ರಮೇಶ್ ಎನ್. ಖಾರ್ವಿ ಹಾಗೂ ಯೋಗಗುರು ಡಾ. ಗೋವಿಂದ ಗುರೂಜಿ ಮಾತನಾಡಿ, ಫೌಂಡೇಶನ್ನ ಸಮಾಜಮುಖಿ ಕಾರ್ಯಗಳನ್ನು ಶ್ಲಾಘಿಸಿದರು.
ಇದೇ ಸಂದರ್ಭದಲ್ಲಿ ಗೌರವ ಡಾಕ್ಟರೇಟ್ ಪಡೆದ ಡಾ. ಗೋವಿಂದ ಗುರೂಜಿ ಹಾಗೂ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಬಬ್ಬನಕಲ್ ಶಾಲೆಯ ಶಿಕ್ಷಕ ಯಶ್ವಂತ್ ನಾಯ್ಕ ಅವರನ್ನು ಸನ್ಮಾನಿಸಲಾಯಿತು.
ಊರಿನ ಮಹಿಳಾ ಪ್ರಮುಖರಾದ ಪದ್ಮಾವತಿ ಎಂ. ಗೊಂಡ, ಫೌಂಡೇಶನ್ ಸದಸ್ಯ ಚಂದ್ರಹಾಸ ನಾಯ್ಕ ಜಾಲಿ ಹಾಗೂ ಸುಗುಣ ಸಿ. ಆಚಾರಿ ಉಪಸ್ಥಿತರಿದ್ದರು.
ಕೆಲವು ತಿಂಗಳ ಹಿಂದೆ ಮಹಿಳೆಯರಿಗಾಗಿ ‘ಸ್ತ್ರೀ ನಮನ’ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸುವ ಮೂಲಕವೂ ಫೌಂಡೇಶನ್ ಗಮನ ಸೆಳೆದಿತ್ತು. ಫೌಂಡೇಶನ್ ಕಾರ್ಯದರ್ಶಿ ಮಾರುತಿ ನಾಯ್ಕ ಜಾಲಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮದ ಉದ್ದೇಶ ಹಾಗೂ ಸಂಸ್ಥೆಯ ವಿವಿಧ ಜನಪರ ಕಾರ್ಯಗಳ ಕುರಿತು ವಿವರಿಸಿದರು.
Kshetra Samachara
09/09/2026 09:47 pm