ಶಿರಸಿ: ತಾಲೂಕಿನ ಸುಗಾವಿ ಗ್ರಾಮದ ಭಟ್ಟರ ಕೆರೆಯಲ್ಲಿ ಈಜಲು ಹೋಗಿದ್ದ ಸ್ಥಳೀಯ ನಿವಾಸಿ ಸುನಿಲ್ ಅಲಿಯಾಸ್ ಸುಜಯ್ (17), ತಂದೆ ಕೃಷ್ಣ ಚನ್ನಯ್ಯ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.
ಮಂಗಳವಾರ ಅದೇ ಗ್ರಾಮದ ಮೂವರು ಯುವಕರು ಸುಮಾರು ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಈಜಾಡಲು ತೆರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಈ ಘಟನೆಯಲ್ಲಿ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದು, ಸುನಿಲ್ ಅಲಿಯಾಸ್ ಸುಜಯ್ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಸುದ್ದಿ ತಿಳಿದ ಕೂಡಲೇ ಬನವಾಸಿ ಪೊಲೀಸರು, ಅಗ್ನಿಶಾಮಕ ದಳದ ಅಧಿಕಾರಿಗಳು ಹಾಗೂ ಶ್ರೀ ಮಾರಿಕಾಂಬಾ ಲೈಫ್ ಗಾರ್ಡ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತೀವ್ರ ಶೋಧ ನಡೆಸಿ ಮೃತದೇಹವನ್ನು ಮೇಲಕ್ಕೆತ್ತುವಲ್ಲಿ ಮಾರಿಕಾಂಬಾ ಲೈಫ್ ಗಾರ್ಡ್ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.
ಮೃತ ಯುವಕನ ತಂದೆ ತೀರಿಕೊಂಡು ಕೇವಲ ಆರು ತಿಂಗಳು ಕಳೆದಿತ್ತು. ಅಷ್ಟರಲ್ಲೇ ಕುಟುಂಬದ ಆಸರೆಯಾಗಿದ್ದ ಇದ್ದೊಬ್ಬ ಮಗನನ್ನು ಕಳೆದುಕೊಂಡ ಹೆತ್ತ ತಾಯಿಯ ಆಕ್ರಂದನ ಮುಗಿಲುಮುಟ್ಟಿದೆ.
ಈ ಘಟನೆ ಕುರಿತು ಬನವಾಸಿ ಪೊಲೀಸ್ ಠಾಣೆಯ ಪಿ.ಎಸ್.ಐ. ಎಂ.ಜಿ. ಕುಂಬಾರ ಅವರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಡಿ.ವೈ.ಎಸ್.ಪಿ. ಗೀತಾ ಪಾಟೀಲ್ ಹಾಗೂ ಸಿ.ಪಿ.ಇ. ಸಂಪತ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಪೊಲೀಸ್, ಅಗ್ನಿಶಾಮಕ ಸಿಬ್ಬಂದಿ ಹಾಗೂ ಶ್ರೀ ಮಾರಿಕಾಂಬಾ ಲೈಫ್ ಗಾರ್ಡ್ (ಆಪತ್ಬಾಂಧವರು) ಪ್ರಮುಖರಾದ ಗೋಪಾಲ ಗೌಡ, ರಾಜು ಮಡಿವಾಳ, ನಾಗೇಶ್ ಕಬ್ಬೆ ಮತ್ತು ಪವನ್ ಶಿರಸಿ ಪಾಲ್ಗೊಂಡಿದ್ದರು.
PublicNext
15/09/2026 10:21 pm
LOADING...