ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಅನ್ವಯವಾಗುವಂತೆ ತುಳು ಭಾಷೆಯನ್ನು ರಾಜ್ಯದ ‘ಎರಡನೇ ಅಧಿಕೃತ ಭಾಷೆ’ಯನ್ನಾಗಿ ಅಂಗೀಕರಿಸಿರುವುದು ಕರಾವಳಿ ಜನತೆಯ ಬಹುದಿನಗಳ ಕನಸಿಗೆ ಸಂದ ಜಯ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಹಾಗೂ ವಿದ್ವಾಂಸ ಡಾ. ಬಿ. ಎ. ವಿವೇಕ ರೈ ವಿಶ್ಲೇಷಿಸಿದ್ದಾರೆ.
ಇದರಿಂದ ಗ್ರಾಪಂನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಆಡಳಿತಾತ್ಮಕ ಪ್ರಕ್ರಿಯೆಗಳಲ್ಲಿ ಕನ್ನಡದ ಜೊತೆಗೆ ತುಳುವಿಗೂ ಅವಕಾಶ ಸಿಗಲಿದೆ. ಜನರು ತುಳುವಿನಲ್ಲಿ ಅರ್ಜಿ ಸಲ್ಲಿಸುವುದು, ಸಭೆಗಳಲ್ಲಿ ಮಾತನಾಡುವುದು ಹಾಗೂ ಸರ್ಕಾರದ ಸುತ್ತೋಲೆ, ನೋಟಿಸ್ಗಳು ಮತ್ತು ನಿಯಮಾವಳಿಗಳನ್ನು ತುಳುವಿನಲ್ಲೂ ಪಡೆಯುವ ಅವಕಾಶ ದೊರೆಯಲಿದೆ.
ಶಾಲೆಗಳಲ್ಲಿ 1ರಿಂದ 10ನೇ ತರಗತಿವರೆಗೆ ತುಳುವನ್ನು ಭಾಷೆಯಾಗಿ ಕಲಿಯಲು ಅವಕಾಶ ಸಿಗಲಿದ್ದು, ಪಠ್ಯಪುಸ್ತಕ ಹಾಗೂ ಶಿಕ್ಷಕರ ನೇಮಕಕ್ಕೆ ಸರ್ಕಾರ ಕ್ರಮ ಕೈಗೊಳ್ಳಬೇಕಾಗುತ್ತದೆ. ವಿಧಾನಸಭೆ, ವಿಧಾನಪರಿಷತ್ತಿನಲ್ಲಿ ತುಳುವಿನ ಬಳಕೆಗೆ ಭಾಷಾಂತರಕಾರರು ಮತ್ತು ಸರ್ಕಾರಿ ದಾಖಲೆಗಳ ಅನುವಾದಕರ ಅಗತ್ಯ ಹೆಚ್ಚಲಿದೆ. ಇದರಿಂದ ತುಳು-ಕನ್ನಡ ಬಲ್ಲ ಯುವಕರಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ಸಂಪುಟ ಸಭೆಯಲ್ಲಿ ಭಾಷಾ ಸೌಲಭ್ಯ ಹಾಗೂ ಅನುವಾದಕರ ತರಬೇತಿಗೆ ಸುಮಾರು ₹85 ಲಕ್ಷ ಮೀಸಲಿಟ್ಟಿರುವುದೂ ಪೂರಕವಾಗಿದೆ.
ತುಳು ಅಧಿಕೃತ ಭಾಷೆಯಾಗಿರುವುದರಿಂದ ತುಳು ಸಿನಿಮಾಗಳು, ನಾಟಕ, ಸಾಹಿತ್ಯ ಮತ್ತು ಕಲಾವಿದರಿಗೆ ರಾಜ್ಯ ಪ್ರಶಸ್ತಿಗಳಲ್ಲಿ ಹೆಚ್ಚಿನ ಅವಕಾಶಕ್ಕಾಗಿ ಹಕ್ಕೊತ್ತಾಯ ಮಂಡಿಸಲು ಬಲ ಸಿಗಲಿದೆ. ಜೊತೆಗೆ ಸಂವಿಧಾನದ 8ನೇ ಪರಿಚ್ಛೇದಕ್ಕೆ ತುಳುವನ್ನು ಸೇರಿಸುವಂತೆ ಕೇಂದ್ರದ ಮೇಲೆ ಒತ್ತಾಯಿಸಲು ರಾಜ್ಯದ ನಿರ್ಧಾರ ಮಹತ್ವದ ಸಾಂವಿಧಾನಿಕ ಬಲ ನೀಡಿದೆ ಎಂದು ವಿವೇಕ ರೈ ಹೇಳಿದ್ದಾರೆ.
PublicNext
19/09/2026 05:30 pm
LOADING...