ಯರಗಟ್ಟಿ: ತೀವ್ರ ಕಗ್ಗಂಟಾಗಿ ಪರಿಣಮಿಸಿದ್ದ ಯರಗಟ್ಟಿ ಕ್ಷೇತ್ರದ ಬಿಡಿಸಿಸಿ ಬ್ಯಾಂಕ್ ಚುನಾವಣಾ ಅಭ್ಯರ್ಥಿ ಆಯ್ಕೆಯು ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರ ಸಂಧಾನದ ಫಲದಿಂದ ಸುಸೂತ್ರವಾಗಿ ನಡೆದಿದ್ದು, ಸವದತ್ತಿ ಶಾಸಕ ವಿಶ್ವಾಸ ವೈದ್ಯ ಅವರು ಯರಗಟ್ಟಿ ಕ್ಷೇತ್ರ ಮತ್ತು ಸವದತ್ತಿ ಕ್ಷೇತ್ರಕ್ಕೆ ವಿರೂಪಾಕ್ಷ ಮಾಮನಿಯವರು ಅಭ್ಯರ್ಥಿಗಳಾಗಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಯರಗಟ್ಟಿ ಭಾಗದ ಪ್ರಮುಖರ ಸಭೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ವೈದ್ಯ ಮತ್ತು ಅಜೀತ ದೇಸಾಯಿ ಬಣಗಳ ಮಧ್ಯೆ ನಡೆಯುತ್ತಿದ್ದ ಜಿದ್ದಾ ಜಿದ್ದಿನ ಹೋರಾಟಕ್ಕೆ ಬ್ರೇಕ್ ಹಾಕಿದ್ದು, ವಿಶ್ವಾಸ ವೈದ್ಯ ಅವರು ನಮ್ಮ ಗುಂಪಿನ ಅಭ್ಯರ್ಥಿಯಾಗಿದ್ದು, ಇದಕ್ಕೆ ಅಜೀತ ದೇಸಾಯಿಯವರು ಸಂಪೂರ್ಣ ಸಹಮತ ಸೂಚಿಸಿದ್ದಾರೆ ಎಂದು ಹೇಳಿದರು.
ಸಹಕಾರಿ ತತ್ವದಡಿ ನಡೆಯುವ ಈ ಚುನಾವಣೆಯು ಪಕ್ಷಾತೀತವಾಗಿದೆ. ಮುಂದಿನ ದಿನಗಳಲ್ಲಿ ದೇಸಾಯಿ ಅವರಿಗೆ ಯಾವುದೇ ಅನ್ಯಾಯ ಆಗದಂತೆ ಅವರನ್ನು ಗೌರವಯುತವಾಗಿ ನಡೆಸಿಕೊಳ್ಳುವುದಾಗಿ ತಿಳಿಸಿದರು. ಸವದತ್ತಿ ಶಾಸಕರಿಂದ ಯಾವ ತೊಂದರೆಗಳು ಆಗದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊತ್ತುಕೊಳ್ಳುತ್ತೇನೆಂದು ಅವರು ದೇಸಾಯಿಯವರ ಬೆಂಬಲಿಗರಿಗೆ ವಾಗ್ದಾನ ಮಾಡಿದರು.
ಅಕ್ಟೋಬರ್ ತಿಂಗಳಲ್ಲಿ ಜರುಗುವ ಬಿಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಪಕ್ಷಾತೀತವಾಗಿ ಚುನಾವಣೆಯನ್ನು ಎದುರಿಸುತ್ತಿದ್ದೇವೆ. 16 ಸ್ಥಾನಗಳಲ್ಲಿ ನಾವು 12 ಸ್ಥಾನಗಳನ್ನು ಗೆಲ್ಲುತ್ತೇವೆ. ಕೆಲವು ಕಡೆಗಳಲ್ಲಿ ಮಾತ್ರ ಚುನಾವಣೆ ನಡೆಯಬಹುದು. ಉಳಿದೆಡೆ ಅವಿರೋಧ ಆಯ್ಕೆಗೆ ಒತ್ತು ಕೊಟ್ಟಿದ್ದು, ಸಮಸ್ಯೆಗಳಿದ್ದ ಕಡೆಗಳಲ್ಲಿ ಚರ್ಚಿಸಿ ಒಮ್ಮತದ ಅಭ್ಯರ್ಥಿಗಳನ್ನು ಹಾಕುತ್ತಿದ್ದೇವೆ. ಬಹುತೇಕವಾಗಿ ಜಿಲ್ಲೆಯ ಎಲ್ಲ ಪಕ್ಷಗಳ ಮುಖಂಡರು ನಮಗೆ ಬೆಂಬಲವನ್ನು ನೀಡುತ್ತಿದ್ದಾರೆ. ಸತೀಶ್ ಜಾರಕಿಹೊಳಿ, ಡಾ. ಪ್ರಭಾಕರ ಕೋರೆ, ರಮೇಶ್ ಜಾರಕಿಹೊಳಿ ಮತ್ತು ಅಣ್ಣಾ ಸಾಹೇಬ ಜೊಲ್ಲೆಯವರು ಬಿಡಿಸಿಸಿ ಬ್ಯಾಂಕಿನ ಚುನಾವಣೆಯ ನೇತೃತ್ವವನ್ನು ವಹಿಸಿಕೊಂಡಿದ್ದಾರೆಂದು ಹೇಳಿದರು.
ಸವದತ್ತಿ ಶಾಸಕ ವಿಶ್ವಾಸ ವೈದ್ಯ, ವಿಶ್ವನಾಥ ಮಾಮನಿ, ಪ್ರಭು ಪ್ರಭುನವರ, ಸಿ.ಪಿ.ಬಾಳಿ, ಚಂದ್ರು ಜಂಬರಿ, ಶಂಕರ ಇಟ್ನಾಳ, ರಮೇಶ ಅಣ್ಣಿಗೇರಿ, ಪಂಚನಗೌಡ ದ್ಯಾಮನಗೌಡರ, ಸದೆಪ್ಪ ವಾರಿ ಸೇರಿದಂತೆ ಯರಗಟ್ಟಿ- ಸವದತ್ತಿ ಭಾಗದ ಅನೇಕ ಮುಖಂಡರು ಉಪಸ್ಥಿತರಿದ್ದರು.
PublicNext
08/09/2025 12:20 pm