ಕೊಪ್ಪ: ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ ಸಮೀಪದ ಅಲಗೇಶ್ವರದ ಎಸ್ಟೇಟ್ನಲ್ಲಿ ಡರ್ಟ್ ಟ್ರ್ಯಾಕ್ ರ್ಯಾಲಿ ಆಯೋಜಿಸಿದ್ದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. 600 ಕ್ಕೂ ಹೆಚ್ಚು ವಾಹನಗಳಲ್ಲಿ ಬಂದ ಸ್ಪರ್ಧಿಗಳು ಭಾಗವಹಿಸಿದ್ದು ಈ ರ್ಯಾಲಿ ಜನಜೀವನ ಹಾಗೂ ವನ್ಯಜೀವಿಗಳಿಗೆ ತೀವ್ರ ಹಾನಿ ಉಂಟಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ವಾಹನಗಳು ಎಬ್ಬಿಸಿದ ಕೆಸರಿನಿಂದ ಹಳ್ಳ-ಕೊಳ್ಳಗಳ ನೀರು ಕಲುಷಿತಗೊಂಡಿದ್ದು, ಗ್ರಾಮಸ್ಥರ ದಿನನಿತ್ಯದ ಅಗತ್ಯಗಳಿಗೆ ತೊಂದರೆ ಉಂಟಾಗಿದೆ. ಜೊತೆಗೆ ನೂರಾರು ಜೀಪುಗಳು ಒಂದೇ ಬಾರಿಗೆ ಸಾಗಿದ ಪರಿಣಾಮ ಶಬ್ಧ ಮಾಲಿನ್ಯ ಹೆಚ್ಚಾಗಿ, ಮಲೆನಾಡಿನ ನೈಸರ್ಗಿಕ ವಾತಾವರಣದ ಮೇಲೆ ದುಷ್ಪರಿಣಾಮ ಬೀರಿದೆ ಎಂದು ವಾದಿಸಲಾಗಿದೆ. ವನ್ಯಜೀವಿಗಳು ವಾಸಿಸುವ ಬೆಟ್ಟ-ಗುಡ್ಡಗಳಲ್ಲಿ ಇಂತಹ ಉತ್ಸವಗಳನ್ನು ಏಕೆ ಆಯೋಜಿಸಬೇಕೆಂದು ಸ್ಥಳೀಯರು ಪ್ರಶ್ನಿಸಿದ್ದಾರೆ.
ಮಲೆನಾಡು ಭಾಗದಲ್ಲಿ ಮಾನವ-ಪ್ರಾಣಿ ಸಂಘರ್ಷ ತೀವ್ರಗೊಂಡಿರುವ ಸಂದರ್ಭದಲ್ಲಿ, ಯಾವುದೇ ಇಲಾಖೆಯ ಅನುಮತಿ ಇಲ್ಲದೇ ಇಂತಹ ಕಾರ್ಯಕ್ರಮ ನಡೆಸಿರುವುದು ಕಾನೂನುಬಾಹಿರ. ಅಲ್ಲದೇ ಲೇಸರ್ ಲೈಟ್, ಡಿಜೆ ಸೌಂಡ್ ಹಾಗೂ ಮದ್ಯಪಾನ ಪಾರ್ಟಿಗಳೂ ನಡೆದಿವೆ ಎಂಬ ಗಂಭೀರ ಆರೋಪ ಕೂಡ ವ್ಯಕ್ತವಾಗಿದೆ. ಈ ಕುರಿತು ಜಿಲ್ಲಾಡಳಿತ, ಅರಣ್ಯ ಹಾಗೂ ಕಂದಾಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
PublicNext
09/09/2025 06:22 pm