ಅಥಣಿ: ಸಾಮಾನ್ಯವಾಗಿ ಅದೃಷ್ಟ ಯಾರಿಗೆ ಯಾವಾಗ ಒಲಿಯುತ್ತದೆ ಎಂದು ಹೇಳುವುದು ಕಷ್ಟ. ಆದರೆ, ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ರೈತರೊಬ್ಬರ ಪಾಲಿಗೆ ಅದೃಷ್ಟ ತಂದುಕೊಟ್ಟಿದ್ದು ಯಾವುದೇ ಲಾಟರಿ ಅಥವಾ ನಿಧಿ ನಿಕ್ಷೇಪವಲ್ಲ, ಬದಲಿಗೆ ಆತನ ಮನೆಯಲ್ಲಿ ಹುಟ್ಟಿದ ಒಂದು ಹೋರಿ ಕರು. ಕೃಷಿಕನ ಶ್ರಮಕ್ಕೆ ಡಿಜಿಟಲ್ ಯುಗಕ್ಕಿಂತಲೂ ಆತನ ಪರಿಶ್ರಮವೇ ಬೆನ್ನೆಲುಬು ಎಂಬುದಕ್ಕೆ ಈ ಕಥೆ ಸಾಕ್ಷಿಯಾಗಿದೆ.
ರಾಜ್ ಎತ್ತಿಗೆ 14.25 ಲಕ್ಷ ರೂ. ಬೆಲೆ
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಅನಂತಪುರ ಗ್ರಾಮದ ರೈತ ಶಿವಾನಂದ ರಾಮಗೌಡ ಪಾಟೀಲರ ಮನೆಯಲ್ಲಿ ಎರಡು ವರ್ಷದ ಹಿಂದೆ ಹುಟ್ಟಿದ 'ರಾಜ್' ಹೆಸರಿನ ಈ ಹೋರಿ ಕರು ಅವರ ಬದುಕನ್ನೇ ಬದಲಾಯಿಸಿದೆ. ಲಕ್ಷದ ಗುರುತು ಪರಿಚಯವೇ ಇಲ್ಲದ ಬಡ ರೈತನ ಈ ರಾಜ್ ಎನ್ನುವ ಎತ್ತು ಬರೋಬ್ಬರಿ 14.25 ಲಕ್ಷ ರೂಪಾಯಿಗಳಿಗೆ ಮಾರಾಟವಾಗಿ ರೈತನ ಬದುಕಿಗೆ ಆಸರೆಯಾಗಿದೆ.
ಅಸಾಧಾರಣ ಸಾಧನೆಗೈದ ರಾಜ್
ನಸು ಕಪ್ಪು ಬಣ್ಣದಲ್ಲಿ ಕಾಣುವ ಈ ಎತ್ತಿಗೆ ವಿಶೇಷವಾದ ಸಾಮರ್ಥ್ಯವಿದೆ. ಕಳೆದ ಒಂದೇ ವರ್ಷದಲ್ಲಿ ಈ ರಾಜ್, ಬರೋಬ್ಬರಿ 27 ಶರತ್ತುಗಳಲ್ಲಿ ಭಾಗವಹಿಸಿ 25 ಬಾರಿ ಪ್ರಥಮ ಮತ್ತು ದ್ವಿತೀಯ ಬಹುಮಾನಗಳನ್ನು ಗಳಿಸುವ ಮೂಲಕ ತನ್ನದೇ ಆದ ಛಾಪು ಮೂಡಿಸಿದೆ. ಇದರ ಅಸಾಧಾರಣ ಸಾಮರ್ಥ್ಯವನ್ನು ಗಮನಿಸಿದ ಮಹಾರಾಷ್ಟ್ರದ ಕೊಲ್ಲಾಪುರ ಮೂಲದ ರೈತರೊಬ್ಬರು, ಈ ಎತ್ತನ್ನು 14,25,000 ರೂ. ನೀಡಿ ಖರೀದಿ ಮಾಡಿ ಗಮನ ಸೆಳೆದಿದ್ದಾರೆ.
ಖುಷಿ ಮತ್ತು ನೋವಿನ ಮಿಶ್ರಣ
ಒಂದೆಡೆ ಭಾರಿ ಮೊತ್ತಕ್ಕೆ ಎತ್ತು ಮಾರಾಟವಾದ ಖುಷಿಯಿದ್ದರೆ, ಮತ್ತೊಂದೆಡೆ ಮಗನಂತೆ ಸಾಕಿದ ಎತ್ತನ್ನು ದೂರ ಕಳಿಸಬೇಕೆಂಬ ನೋವು ರೈತ ಶಿವಾನಂದರ ಕಣ್ಣಂಚಲ್ಲಿ ನೀರು ತರಿಸಿದೆ. ಒಟ್ಟಾರೆ, ಈ ರೈತನ ದೇಶಿ ರಾಸುಗಳ ಮೇಲಿನ ಪ್ರೀತಿ ಮತ್ತು ಪರಿಶ್ರಮಕ್ಕೆ ಕೊನೆಗೂ ಸಿಕ್ಕ ಪ್ರತಿಫಲ ಇದು ಎನ್ನುವುದು ಸುಳ್ಳಲ್ಲ.
Kshetra Samachara
27/01/2026 11:32 am
LOADING...